ADVERTISEMENT

‘ಅವರಿಗೆ ಇಬ್ಬರು ಬಾಳಸಂಗಾತಿಗಳು’!

‘ರತ್ನ’ದ ಜತೆಗಿನ ಐದು ದಶಕಗಳ ಇಂದುಮತಿ ರಾವ್‌ ದಾಂಪತ್ಯ ಗೀತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2013, 19:52 IST
Last Updated 18 ನವೆಂಬರ್ 2013, 19:52 IST
‘ಭಾರತ ರತ್ನ’ ಗೌರವಕ್ಕೆ ಪಾತ್ರರಾದ ಹಿರಿಯ ವಿಜ್ಞಾನಿ ಪ್ರೊ. ಸಿಎನ್‌ಆರ್‌ ರಾವ್‌ ಅವರನ್ನು ಸೋಮವಾರ ನಗರದ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆ (ಜೆಎನ್‌ಸಿಎಎಸ್‌ಆರ್‌)ಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಿರಿಯ ವಿಜ್ಞಾನಿಗಳಾದ ಪ್ರೊ. ರೊದ್ದಂ ನರಸಿಂಹ, ಪ್ರೊ.ವಿ. ಕೃಷ್ಣನ್‌, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಟಿ.ರಾಮಸ್ವಾಮಿ, ಜೆಎನ್‌ಸಿಎಎಸ್‌ಆರ್‌ ತಾತ್ಕಾಲಿಕ ಅಧ್ಯಕ್ಷ ಕೆ.ಎಸ್‌. ನಾರಾಯಣ ಮತ್ತು ರಾವ್‌ ಅವರ ಪತ್ನಿ ಇಂದುಮತಿ ರಾವ್‌ ಹಾಜರಿದ್ದರು 	–ಪ್ರಜಾವಾಣಿ ಚಿತ್ರ
‘ಭಾರತ ರತ್ನ’ ಗೌರವಕ್ಕೆ ಪಾತ್ರರಾದ ಹಿರಿಯ ವಿಜ್ಞಾನಿ ಪ್ರೊ. ಸಿಎನ್‌ಆರ್‌ ರಾವ್‌ ಅವರನ್ನು ಸೋಮವಾರ ನಗರದ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆ (ಜೆಎನ್‌ಸಿಎಎಸ್‌ಆರ್‌)ಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಿರಿಯ ವಿಜ್ಞಾನಿಗಳಾದ ಪ್ರೊ. ರೊದ್ದಂ ನರಸಿಂಹ, ಪ್ರೊ.ವಿ. ಕೃಷ್ಣನ್‌, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಟಿ.ರಾಮಸ್ವಾಮಿ, ಜೆಎನ್‌ಸಿಎಎಸ್‌ಆರ್‌ ತಾತ್ಕಾಲಿಕ ಅಧ್ಯಕ್ಷ ಕೆ.ಎಸ್‌. ನಾರಾಯಣ ಮತ್ತು ರಾವ್‌ ಅವರ ಪತ್ನಿ ಇಂದುಮತಿ ರಾವ್‌ ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನನ್ನ ಪತಿಗೆ ನಾನು ಮತ್ತು ವಿಜ್ಞಾನ ಇಬ್ಬರೂ ಬಾಳಸಂಗಾತಿಗಳು’
– ‘ಭಾರತ ರತ್ನ’ ಪ್ರಶಸ್ತಿಗೆ ಭಾಜನರಾದ ಸಿಎನ್‌ಆರ್‌ ರಾವ್‌ ಅವರ ಪತ್ನಿ ಇಂದುಮತಿ ಮನ­ದುಂಬಿ ನಗುತ್ತಾ ಹೇಳುವ ಮಾತಿದು.



ರಾವ್‌ ಜತೆಗಿನ ತಮ್ಮ 54 ವರ್ಷಗಳ ‘ದಾಂಪತ್ಯ ಗೀತ’ದ ಕೆಲವು ‘ಸಾಲು’ಗಳನ್ನು ಅವರು ‘ಪ್ರಜಾವಾಣಿ’ ಜತೆ ಹಂಚಿ­ಕೊಂಡರು.
ಶಿಕ್ಷಕಿಯಾಗಿ ನಿವೃತ್ತಿ ಹೊಂದಿರುವ ಅವರಿಗೆ ಭೂಗೋಳ­ಶಾಸ್ತ್ರದ ಮೇಲೆ ವಿಶೇಷ ಆಸಕ್ತಿ. ನಿವೃತ್ತಿ ಬಳಿಕವೂ ಅವರ ಕೆಲಸದ ಪ್ರೀತಿ ಕಡಿಮೆ ಆಗಿಲ್ಲ. ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಮಲ್ಟಿಮಿಡಿಯಾ ವಿಭಾಗದಲ್ಲಿ ಗೌರವ ಸಮನ್ವಯ ಅಧಿಕಾರಿಯಾಗಿ ಈಗಲೂ ಕೆಲಸ ಮಾಡುತ್ತಾರೆ.

ದೇಶದ ಈ ಪ್ರತಿಷ್ಠಿತ ವಿಜ್ಞಾನಿಯ ಬಿಡುವಿಲ್ಲದ ಕೆಲಸ, ಹವ್ಯಾಸ, ಕುಟುಂಬದ ಮೇಲಿನ ಪ್ರೀತಿ ಎಲ್ಲ­ವನ್ನೂ ಇಂದುಮತಿ ಎಳೆ–ಎಳೆಯಾಗಿ ಬಿಡಿಸಿಡುತ್ತಾರೆ. ‘ನಾವಿಬ್ಬರೂ ಪರಿಪೂರ್ಣ ಜತೆಗಾರರು. ಅವರಿಗೂ, ನನಗೂ ಹಿಂದೂಸ್ತಾನಿ ಸಂಗೀತ ಎಂದರೆ ಪಂಚಪ್ರಾಣ. ನಮ್ಮ ದಿನ ಆರಂಭವಾಗುವುದು ಮತ್ತು ಮುಗಿಯು­ವುದು ಎರಡೂ ಹಿಂದೂಸ್ತಾನಿ ಸಂಗೀತದಿಂದಲೇ’ ಎಂದು ಹೇಳುತ್ತಾರೆ.
‘ಬೆಳಿಗ್ಗೆ 4.30ರ ಸುಮಾರಿಗೆ ಏಳುತ್ತೇವೆ. ಹಿಂದೂ­ಸ್ತಾನಿ ಸಂಗೀತವೇ ನಮಗೆ ಸುಪ್ರಭಾತ ಹಾಡುತ್ತದೆ. ತುಸು­ಹೊತ್ತು ಯೋಗ ಮಾಡುತ್ತೇವೆ. ಆಮೇಲೆ ಕೆಲಸದ ಕಡೆಗೆ ಗಮನ. ದಿನದ ಕೆಲಸ ಏನು ಎಂಬು­ದನ್ನು ಅವರು ಆಗಲೇ ನಿರ್ಧಾರ ಮಾಡುತ್ತಾರೆ. 9ರ ವೇಳೆಗೆ ಕಚೇರಿಗೆ ಹೊರಟು ಬಿಡುತ್ತಾರೆ’ ಎಂದು ವಿವರಿಸುತ್ತಾರೆ.

‘ಕಚೇರಿಯಲ್ಲಿ ಅವರು ಸಮಯವನ್ನು ವ್ಯರ್ಥ ಮಾಡು­ವುದಿಲ್ಲ. ಚಹಾ–ಕಾಫಿ ಎಂದು ಓಡಾಡುವು­ದಿಲ್ಲ. ಮಧ್ಯಾಹ್ನ ಊಟಕ್ಕೆ ಮಾತ್ರ ಒಂದು ಗಂಟೆ ಬಿಡುವು ಪಡೆಯುತ್ತಾರೆ. ಅವರದು ತುಂಬಾ ಲಘು­ವಾದ ಭೋಜನ. ಕಚೇರಿಯಿಂದ ಬಂದಮೇಲೆ ಮನೆ­ಯಲ್ಲೂ ಅವರು ಕೆಲಸ ಮಾಡುತ್ತಾರೆ. ಸಂಶೋಧನಾ ಚಟುವಟಿಕೆಯೂ ಸಮಾನಾಂತರವಾಗಿ ನಡೆದಿರುತ್ತದೆ’ ಎಂದು ಪತಿಯ ಬಿಡುವಿಲ್ಲದ ದಿನಚರಿಯನ್ನು ತೆರೆದಿಡುತ್ತಾರೆ.

ರಾವ್‌ ಅವರ ಸಮಯಪ್ರಜ್ಞೆಗೆ ನೂರಕ್ಕೆ ನೂರು ಅಂಕ ನೀಡುವ ಇಂದುಮತಿ, ‘ಸಮಯ ಪರಿಪಾಲನೆ­ಯನ್ನು ಅವರಿಂದಲೇ ಕಲಿಯಬೇಕು’ ಎಂದು ಹೇಳುತ್ತಾರೆ.

ವಿಜ್ಞಾನವನ್ನು ಬಾಳ ಸಂಗಾತಿ ಮಾಡಿಕೊಂಡರೂ ಕುಟುಂಬದ ಜತೆ ಬಿಡುವಿನ ವೇಳೆ ಕಳೆಯಲು ರಾವ್‌ ಅವರಿಗೆ ತುಂಬಾ ಇಷ್ಟವಂತೆ. ‘ಸಮಯ ಸಿಕ್ಕಾಗಲೆಲ್ಲ ಮಕ್ಕಳು, ಮೊಮ್ಮಕ್ಕಳ ಜತೆ ಬೆರೆಯುತ್ತಾರೆ’ ಎಂದು ತಿಳಿಸುತ್ತಾರೆ.

‘ಕೆಲಸದ ಮೇಲೆ ಅವರು ವಿದೇಶಕ್ಕೆ ಹೋದಾಗಲೆಲ್ಲ ನಾನು ಮತ್ತು ನಮ್ಮ ಪ್ರೀತಿಯ ನಾಯಿ ‘ಚಿಂಬಾ’ ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇವೆ. ಸಿಎನ್‌ಆರ್‌ಗೂ ನಾಯಿಗಳೆಂದರೆ ಅಷ್ಟೇ ಪ್ರೀತಿ’ ಎಂದು ಹೇಳುತ್ತಾರೆ.

‘ಭೀಮಸೇನ ಜೋಶಿ, ಹರಿಪ್ರಸಾದ್‌ ಚೌರಾಸಿಯಾ, ಅಮ್ಜದ್‌ ಅಲಿ ಖಾನ್‌ ಅವರ ಗಾಯನವನ್ನು ಬಹುವಾಗಿ ಕೇಳುತ್ತೇವೆ’ ಎಂದೆನ್ನುವ ಅವರು, ‘ನಾನು, ಸಿಎನ್‌ಆರ್‌ ಸಂಶೋಧನೆಗೆ ನನ್ನ ಸಮಯವನ್ನು ಬಿಟ್ಟುಕೊಟ್ಟೆ. ಅವರು ನನಗೆ ಶಿಕ್ಷಕ ವೃತ್ತಿ ಕೈಗೊಳ್ಳುವಂತೆ ಪ್ರೇರೇಪಿಸಿದರು’ ಎಂದು ವಿವರಿಸುತ್ತಾರೆ. ‘ಶಾಪಿಂಗ್‌ ಬಗೆಗೆ ನನ್ನಲ್ಲಿ ಅಷ್ಟಾಗಿ ಆಸಕ್ತಿ ಇಲ್ಲ. ನನ್ನ ಬೇಡಿಕೆಗಳೂ ಅಷ್ಟಾಗಿಲ್ಲ’ ಎನ್ನುತ್ತಾರೆ.

‘ನಮ್ಮೆಲ್ಲರಿಗಿಂತ ದೊಡ್ಡದಾದುದು ಏನೋ ಇದೆ ಎಂಬುದು ನಮ್ಮಿಬ್ಬರ ಬಲವಾದ ನಂಬಿಕೆ. ನೀವು ಅದಕ್ಕೆ ದೇವರು ಇಲ್ಲವೆ ನಿಸರ್ಗ ಯಾವ ಹೆಸರಿನಿಂದ ಕರೆಯಲು ಅಡ್ಡಿಯಿಲ್ಲ. ನಮ್ಮ ನಂಬಿಕೆ ಪ್ರೀತಿಯ ದೇವರ ಮೇಲೆ ಹೊರತು ದ್ವೇಷದ ದೇವರ ಮೇಲಲ್ಲ ಎಂದು ಇಂದುಮತಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT