
ಬೆಂಗಳೂರು: ‘ವಕೀಲರು ಕ್ರಿಯಾಶೀಲತೆ ಹಾಗೂ ನಿಷ್ಪಕ್ಷಪಾತವಾಗಿ ದುಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಅರ್ಥ ಬರುತ್ತದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಅಭಿಪ್ರಾಯಪಟ್ಟರು.
ಬಿ.ಎಂ.ಎಸ್. ಕಾನೂನು ಕಾಲೇಜಿನಲ್ಲಿ ಸೋಮವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ‘ವಕೀಲ ವೃತ್ತಿಯ ಶ್ರೇಷ್ಠತೆಯನ್ನು ಕಾಯುವ ನಿಟ್ಟಿನಲ್ಲಿ ಯುವ ವಕೀಲರನ್ನು ರೂಪಿಸಬೇಕಿದ್ದು, ಶಿಕ್ಷಣ ಸಂಸ್ಥೆಗಳು ಕಲಿಕಾ ಕ್ರಮವನ್ನು ಮೇಲ್ದರ್ಜೆಗೇರಿಸಬೇಕಿದೆ’ ಎಂದು ಹೇಳಿದರು.
‘ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡವರು ಮಾತ್ರ ಉತ್ತಮ ವಕೀಲರಾಗಲು ಸಾಧ್ಯ. ಶ್ರೀಸಾಮಾನ್ಯನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಕೀಲರು ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು. ‘ಅಪರಾಧಶಾಸ್ತ್ರ, ಮನಃಶಾಸ್ತ್ರ ಗಳನ್ನು ಸೂಕ್ಷ್ಮವಾಗಿ ಅರಿತುಕೊಂಡು ವಕೀಲರು ಈ ವೃತ್ತಿಯಲ್ಲಿ ಮುಂದುವರಿಯಬೇಕು. ಆಗ ಯಶಸ್ಸು ಗಳಿಸಲು ಸಾಧ್ಯ’ ಎಂದು ತಿಳಿಸಿದರು.
ಕಾಲೇಜಿನ ಟ್ರಸ್ಟಿ ಪಿ.ದಯಾನಂದ ಪೈ, ‘ಯುವ ಸಮುದಾಯ ಎಂಜಿನಿಯರಿಂಗ್ ಹಾಗೂ ವೈದ್ಯ ವೃತ್ತಿಯೆಡೆಗೆ ಹೆಚ್ಚು ಆಕರ್ಷಿತ ಆಗುತ್ತಿದೆ. ಅವರು ವಕೀಲ ವೃತ್ತಿಯೆಡೆಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.