ADVERTISEMENT

‘ಮಹಿಳೆಯರ ರಕ್ಷಣೆಗೆ ಮಾರ್ಷಲ್‌ ಆರ್ಟ್‌ ಕಲಿಸಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಬೆಂಗಳೂರು: ‘ಹೆಣ್ಣುಮಕ್ಕಳಿಗೆ ಪ್ರಾಥ­ಮಿಕ ಶಾಲಾ ಹಂತದಿಂದ ಕಾಲೇಜು­ವರೆಗೆ ಕರಾಟೆ, ಮಾರ್ಷಲ್ ಆರ್ಟ್‌­ನಂತಹ ರಕ್ಷಣಾ  ಕಲೆಗಳನ್ನು ಕಲಿಸ­ಬೇಕಾದ ಅಗತ್ಯವಿದೆ’ ಎಂದು ಲೋಕ­ಸತ್ತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಡಾ.ಮೀನಾಕ್ಷಿ ಆರ್‌.ಭರತ್‌ ಹೇಳಿದರು. ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ವತಿ­ಯಿಂದ ನಗರದಲ್ಲಿ ಗುರುವಾರ ಏರ್ಪ­ಡಿ­ಸಿದ್ದ  ‘ಉದ್ಯೋಗದ ಸ್ಥಳದಲ್ಲಿ ಮಹಿಳೆ­ಯರ ಮೇಲೆ ಲೈಂಗಿಕ ಕಿರುಕುಳ – ಸುರಕ್ಷತೆ’ ಕುರಿತ ಚರ್ಚಾ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ನಡೆದ ನಂತರ ಅವುಗಳಿಗೆ ಪರಿಹಾರ ಹುಡುಕುವ ಬದಲು ಹೆಣ್ಣು ಮಕ್ಕಳಲ್ಲಿ ಅಂತಹ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಮೈನೋಸ್ಥೈರ್ಯ ತುಂಬ­ಬೇಕಾದ ಅಗತ್ಯವಿದೆ. ಅದು  ಕರಾಟೆ, ಮಾರ್ಷಲ್‌ ಆರ್ಟ್‌ನಂತಹ  ಕಲೆಗಳಿಂದ ಸಾಧ್ಯ ಎಂದರು.

ವಕೀಲೆ ಜ್ಯೋತಿ ಭಟ್‌ ಮಾತನಾಡಿ, ಮಹಿಳೆಯರು ಪ್ರಚೋದನಕಾರಿ­ಯಾದಂತಹ ಬಟ್ಟೆ ಧರಿಸುವುದು ಅತ್ಯಾಚಾರಕ್ಕೆ ಕಾರಣ ಎಂಬುದು ಕೆಲವರ ವಾದವಾಗಿದೆ. ಆದರೆ, ಇದು ಕೇವಲ ವಸ್ತ್ರದ ಸಮಸ್ಯೆಯಲ್ಲ. ಅಂತಹ­ವರ ಮನಸ್ಥಿತಿ ಮತ್ತು ಬೆಳೆದು ಬಂದ ಪರಿಸರ ಅದಕ್ಕೆ ಕಾರಣ­ವಾಗಿರುತ್ತದೆ.

ಈ ಕುರಿತು ಸಮಾಜ­ದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು. ನಟಿ ಶಿರಿನ್‌ ಶೃಂಗಾರ್‌, ಪ್ರತಿ ಕ್ಷೇತ್ರಗಳಲ್ಲಿಯೂ ಇಂತಹ ಪರಿಸ್ಥಿತಿ­ಯನ್ನು ಮಹಿಳೆಯರು ಎದುರಿಸ­ಬೇಕಾಗು­ತ್ತದೆ. ಆದರೆ, ಅದನ್ನು ಸಮರ್ಥವಾಗಿ ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT