ಬೆಂಗಳೂರು: ‘ದುಂದುವೆಚ್ಚ, ಮೋಜಿನ ಔತಣಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಹಸಿದವರಿಗೆ ಆಹಾರ, ಬಾಯಾರಿದವರಿಗೆ ನೀರು ಕೊಟ್ಟು ಹರಸಬೇಕು. ಕ್ಯಾನ್ಸರ್, ಏಡ್ಸ್ ರೋಗಿಗಳತ್ತ ನಮ್ಮ ಕಣ್ಣುಗಳು ಸದಾ ನೋಡುವಂತಾಗಬೇಕು’
–ನಗರದ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ಶುಕ್ರವಾರ ನೀಡಿದ ಕ್ರಿಸ್ಮಸ್ ಸಂದೇಶ ಇದು. ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮದಲ್ಲಿ ಅವರು ಈ ಸಂದೇಶವನ್ನು ನೀಡಿದರು.
‘ಸಮಾಜದಲ್ಲಿ ಅಶಾಂತಿಯನ್ನು ಕಡಿಮೆ ಮಾಡಲು ತಾರತಮ್ಯ, ಭ್ರಷ್ಟಾಚಾರ, ಶೋಷಣೆಯಂತಹ ಬೃಹತ್ ಗೋಡೆಗಳನ್ನು ಕೆಡವಿ ಹಾಕಬೇಕಿದೆ. ಅದಕ್ಕಾಗಿ ಎಲ್ಲರೂ ಒಂದುಗೂಡಬೇಕಿದೆ. ಸರಳ ಜೀವನ ನಡೆಸುವ ಮೂಲಕ ದೀನ–ದಲಿತರು ಹಾಗೂ ನಿರ್ಗತಿಕರ ಮೇಲೆ ಒಲವು ತೋರಬೇಕಿದೆ’ ಎಂದು ಕಿವಿಮಾತು ಹೇಳಿದರು.
‘ಪಡೆಯುವುದಕ್ಕಿಂತ ಕೊಡುವುದೇ ಹೆಚ್ಚು ಧನ್ಯವಾದುದು ಎನ್ನುತ್ತದೆ ಪವಿತ್ರ ಬೈಬಲ್. ನನ್ನ ಸಂದೇಶವಾದರೂ ಇದೇ ಆಗಿದೆ. ಉಳ್ಳವರು ಇಲ್ಲದವರ ಮೇಲೆ ಕಾಳಜಿ– ಪ್ರೀತಿ ತೋರಬೇಕು’ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ‘ಜಗತ್ತಿನ ಎಲ್ಲ ಧರ್ಮಗಳ ತಿರುಳೂ ಒಂದೇ ಆಗಿದೆ. ಅದೇ ಸಹಬಾಳ್ವೆ ಮತ್ತು ಶಾಂತಿ’ ಎಂದರು. ‘ಜಗತ್ತಿನ ಎಲ್ಲ ಧರ್ಮಗಳಿಗೆ ನೆಲೆ ನೀಡಿದ ಭಾರತದಂತಹ ದೇಶ ಮತ್ತೊಂದಿಲ್ಲ’ ಎಂದು ಅಭಿಮಾನದಿಂದ ಹೇಳಿದರು.
‘ಕ್ರಿಶ್ಚಿಯನ್ನರು ಮತ್ತು ಅವರ ಮಿಷನರಿಗಳಷ್ಟು ಸಮಾಜ ಸೇವೆ ಮಾಡುವ ಸಂಸ್ಥೆಗಳನ್ನು ನಾನು ಬೇರೆ ಕಂಡಿಲ್ಲ. ಯಾರೇ ಅಸಹಾಯಕ ಸ್ಥಿತಿಯಲ್ಲಿದ್ದರೂ ಮೊದಲ ಸಹಾಯಹಸ್ತ ಸಿಗುವುದು ಕ್ರಿಶ್ಚಿಯನ್ನರಿಂದ’ ಎಂದು ತಿಳಿಸಿದರು.
ಗೃಹ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ರೋಷನ್ ಬೇಗ್, ಎನ್.ಎ.ಹ್ಯಾರೀಸ್ ಮತ್ತು ಮಾಜಿ ಸಂಸದ ಎಚ್.ಟಿ. ಸಾಂಗ್ಲಿಯಾನ ಹಾಜರಿದ್ದರು.
ಶಾಲಾ ಮಕ್ಕಳು ಬಾಲ ಯೇಸು ರೂಪಕವನ್ನು ಪ್ರಸ್ತುತಪಡಿಸಿದರು. ಕೆರೋಲ್ ಗೀತೆಗಳು ಮನಸೂರೆಗೊಂಡವು. ಆರ್ಚ್ ಬಿಷಪ್ ಅವರು ರಾಜ್ಯಪಾಲರ ಜತೆಗೂಡಿ ಬಾಲ ಯೇಸುವನ್ನು ಗುಡಿಸಲಿನ ಒಳಗಿದ್ದ ತೊಟ್ಟಿಲಿನಲ್ಲಿ ಪವಡಿಸುವಂತೆ ಮಾಡಿದರು.
‘ವ್ಯಾಕುಲ ದೂರವಾಗಿದೆ’
ಬೆಂಗಳೂರು: ‘ಹಿಂದೆ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆದಾಗ ಆರ್ಚ್ ಬಿಷಪ್ ಮತ್ತು ನಾನು ತುಂಬಾ ವ್ಯಾಕುಲಕ್ಕೆ ಒಳಗಾಗಿದ್ದೆವು. ಚಿಂತೆ ಬೇಡ, ಒಳ್ಳೆಯ ದಿನಗಳು ಬರುತ್ತವೆ ಎನ್ನುವ ಭರವಸೆಯನ್ನು ಬಿಷಪ್ ಅವರಿಗೆ ನೀಡಿದ್ದೆ. ಅಂತಹ ದಿನಗಳು ಈಗ ಬಂದಿವೆ. ಕ್ರಿಶ್ಚಿಯನ್ ಸಮುದಾಯಕ್ಕೇ ಸೇರಿದ ಕೆ.ಜೆ. ಜಾರ್ಜ್ ರಾಜ್ಯದ ಗೃಹ ಮಂತ್ರಿಯಾಗಿದ್ದಾರೆ’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.