ಬೆಂಗಳೂರು: ‘ಜಕಣಾಚಾರಿ ಸ್ಮರಣೆಯ ದಿನವನ್ನು ಸರ್ಕಾರವೇ ಆಚರಿಸಲು ಮುಂದಾಗಬೇಕು. ಶಿಲ್ಪಕಲೆಗೆ ಜಕಣಾಚಾರಿ ಹಾಗೂ ಡಂಕಣಾಚಾರಿ ನೀಡಿರುವ ಕೊಡುಗೆಯ ವಿಷಯವನ್ನು ಶಾಲಾಪಠ್ಯದಲ್ಲಿ ಸೇರಿಸಬೇಕು’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಅಮರಶಿಲ್ಪಿ ಜಕಣಾಚಾರಿ ಸ್ಮರಣೆಯ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಕಣಾಚಾರಿಯ ಅಸ್ತಿತ್ವವನ್ನು ಪ್ರಶ್ನಿಸುವ ಮೂಲಕ ಕೆಲವರು ವಿಶ್ವಕರ್ಮ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಅಂಥವರ ಯತ್ನವನ್ನು ವಿಫಲಗೊಳಿಸಲು ಸಮುದಾಯ ಒಗ್ಗಟ್ಟಾಗಿ ಬೆಳೆಯಬೇಕು’ ಎಂದರು.
ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ‘ಶ್ರಮಿಕ ಸಮುದಾಯ ಎಂದಿಗೂ ಹೆಸರಿಗಾಗಿ ಕೆಲಸ ಮಾಡಲಿಲ್ಲ. ಹೀಗಾಗಿ ಜಕಣಾಚಾರಿ ಅಸ್ತಿತ್ವದ ಬಗ್ಗೆ ಅನುಮಾನಿಸುವುದು ಸರಿಯಲ್ಲ. ಜಕಣಾಚಾರಿ ಇರಲಿಲ್ಲ ಎನ್ನುವುದಾದರೆ ಶ್ರೀರಾಮನೂ ಇರಲಿಲ್ಲ ಎಂದು ಹೇಳಬೇಕಾಗುತ್ತದೆ’ ಎಂದರು.
ಲೇಖಕ ಡಾ.ಸಿ.ಎಸ್. ದ್ವಾರಕಾನಾಥ್, ‘ಸಣ್ಣ ಸಮುದಾಯಗಳ ಪರಂಪರೆಯನ್ನು ಅವಹೇಳನ ಮಾಡುವ ಮೂಲಕ ಆ ಸಮುದಾಯಗಳ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಕುತಂತ್ರದ ಬಗ್ಗೆ ಸಣ್ಣ ಸಮುದಾಯಗಳು ಎಚ್ಚರವಾಗಿರಬೇಕು’ ಎಂದರು.
ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ‘600 ದೇವಾಲಯಗಳನ್ನು ನಿರ್ಮಿಸಿದ ಮಹಾನ್ ಶಿಲ್ಪಿ ಜಕಾಣಾಚಾರಿ. ಪ್ರತಿ ವರ್ಷ ಜನವರಿ ಒಂದರಂದು ಅವರ ಸ್ಮರಣೆಯ ದಿನ-ವನ್ನು ಆಚರಿಸಲಾಗುವುದು. ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆಯಿರುವ ವಿಶ್ವಕರ್ಮ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ’ ಎಂದರು.
‘ವಿಶ್ವಕರ್ಮ ಮಹಾಸಭಾ ಕ್ರೆಡಿಟ್ ಕೋ– ಆಪರೇಟಿವ್ ಸೊಸೈಟಿ’ ಮತ್ತು ‘ಕಾಳಿಕಾದೇವಿ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ’ಕ್ಕೆ ಚಾಲನೆ ನೀಡಲಾಯಿತು. ಮಾಜಿ ಸಚಿವ ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಆಪ್ತರೇ ಹೊರತು ಮುಖ್ಯಮಂತ್ರಿಯಲ್ಲ
ಸದ್ಯದ ರಾಜಕೀಯ ಬೆಳವಣಿಗೆಗಳ ವಿಚಾರದಲ್ಲಿ ಮುಖ್ಯಮಂತ್ರಿಯವರು ನನ್ನ ಮಾತು ಕೇಳುತ್ತಿಲ್ಲ ನಿಜ. ನನಗೆ ಸಿದ್ದರಾಮಯ್ಯ ಆಪ್ತರೇ ಹೊರತು ಮುಖ್ಯಮಂತ್ರಿಯಲ್ಲ. ಸಿದ್ದರಾಮಯ್ಯ ಆಪ್ತರಾಗಿರುವ ಕಾರಣಕ್ಕೆ ನಾನಿನ್ನೂ ಕಾಂಗ್ರೆಸ್ನಲ್ಲಿದ್ದೇನೆ. ಇಲ್ಲವಾದರೆ ಅವರಿಗೂ, ಪಕ್ಷಕ್ಕೂ ಯಾವತ್ತೋ ತಲಾಕ್ ಹೇಳುತ್ತಿದ್ದೆ.
–ಸಿ.ಎಂ.ಇಬ್ರಾಹಿಂ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.