ADVERTISEMENT

‘ಸಭ್ಯ ಸಮಾಜದ ನಿರ್ಮಾಣ ಸಾಹಿತಿಗಳ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 16 ಮೇ 2014, 19:48 IST
Last Updated 16 ಮೇ 2014, 19:48 IST
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತು–100’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪುತ್ಥಳಿಗೆ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ವಿಮರ್ಶಕ ಪ್ರೊ.ಜಿ.ಅಶ್ವತ್ಥನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಶ್‌ ಮಾಲಾರ್ಪಣೆ ಮಾಡಿದರು	– ಪ್ರಜಾವಾಣಿ ಚಿತ್ರ
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತು–100’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪುತ್ಥಳಿಗೆ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ವಿಮರ್ಶಕ ಪ್ರೊ.ಜಿ.ಅಶ್ವತ್ಥನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಶ್‌ ಮಾಲಾರ್ಪಣೆ ಮಾಡಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜನಪ್ರತಿನಿಧಿಗಳು ದಾರಿ ತಪ್ಪದಂತೆ ನೋಡಿಕೊಳ್ಳುವುದು ಸಾಹಿತಿಗಳ ಕೆಲಸವಾಗಬೇಕು. ಸಭ್ಯ ಸಮಾಜದ ನಿರ್ಮಾಣ ಸಾಹಿತಿಗಳ ಆದ್ಯತೆಯಾಗಬೇಕು’ ಎಂದು ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತು–100’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯಾವುದೇ ಒಂದು ಪಕ್ಷವನ್ನು ಪ್ರತಿನಿಧಿಸಿ, ಅವರ ಪರ ಪ್ರಚಾರ ಮಾಡುವುದು ಸಾಹಿತಿಗಳ ಕೆಲಸವಲ್ಲ. ಸಾಹಿತ್ಯದ ಕೆಲಸ ಯಾವುದೇ ಚುನಾವಣೆಯನ್ನು ಅವಲಂಬಿಸಿಲ್ಲ. ಯಾವ ಪಕ್ಷವು ಆಡಳಿತಕ್ಕೆ ಬಂದರೂ ನಮಗೆ ಮುಖ್ಯವಲ್ಲ. ದೇಶದ ಸಮಗ್ರತೆ, ಘನತೆಯನ್ನು ಕಾಯಬೇಕು ಎನ್ನುವುದೇ ಅಪೇಕ್ಷೆಯಾಗಿದೆ’ ಎಂದು ಹೇಳಿದರು.

‘ಸಾಹಿತ್ಯ ಪರಿಷತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಮಾತೃಸಂಸ್ಥೆಯಾಗಿದೆ. ಕೇವಲ 100– 200 ಸದಸ್ಯರಿಂದ ಆರಂಭವಾಗಿದ್ದ ಸಂಸ್ಥೆ ಇಂದು 2 ಲಕ್ಷ ಸದಸ್ಯರನ್ನು ಹೊಂದಿದೆ’ ಎಂದರು.

‘ಸಾಹಿತ್ಯ ಪರಿಷತ್ತಿನ 100 ರ ವರ್ಷಾಚರಣೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಭಾಷಣ, ವಿಚಾರ ಸಂಕಿರಣಕ್ಕೆ ಮಾತ್ರ ಸೀಮಿತವಾಗಬಾರದು. ಇದೊಂದು ಸಾರ್ವಜನಿಕ ಹಬ್ಬವಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಸಮಾಜ ಶಿಕ್ಷಣ ಸಂಸ್ಥೆಯಾಗಬೇಕು’ ಎಂದು ಹೇಳಿದರು.

‘ಸರ್ಕಾರ ಸಂಸ್ಥೆಗೆ ನೀಡುವುದು ದಾನವಲ್ಲ, ನಾವು ಪಡೆಯುವುದು ಭಿಕ್ಷೆಯಲ್ಲ. ರಾಜ್ಯದ ಸಾಹಿತ್ಯ ಮತ್ತು ಸಂಸ್ಕೃತಿಗೆ ನೆರವು ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ’ ಎಂದರು.

ವಿಮರ್ಶಕ ಪ್ರೊ.ಜಿ.ಅಶ್ವತ್ಥನಾರಾಯಣ, ‘ಸಂಸ್ಥೆಯ ಒಂದೊಂದು ಕಣವು ಸಾಹಿತಿಗಳ ತ್ಯಾಗದ ಮತ್ತು ನಿರಂತರ ಶ್ರಮದ ಪ್ರತೀಕ. ಹಿಂದೆ ಸಾಹಿತ್ಯ ಪರಿಷತ್ತು ಸಾಹಿತಿಗಳ ಕಾಶಿಯಾಗಿತ್ತು. ಇದು ಕೇವಲ ಸಂಸ್ಥೆಯಲ್ಲ. ಸಾಹಿತಿಗಳ ಜೀವಂತ ಸಂಗಮವಾಗಿತ್ತು’ ಎಂದು ನೆನೆದರು.

ಸುತ್ತೋಲೆ ಹೊರಡಿಸಿ
ಸಾಹಿತ್ಯ ಪರಿಷತ್ತಿನ 100ರ ವರ್ಷಾ ಚರಣೆಯನ್ನು ಪ್ರಾಥಮಿಕ ಶಾಲೆಗಳಿಂದ ಸ್ನಾತಕೋತ್ತರ ಕಾಲೇಜು ಗಳವರೆಗೂ ಆಚರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಬೇಕು.

– ಗೊ.ರು.ಚನ್ನಬಸಪ್ಪ, ಅಧ್ಯಕ್ಷ, ಕರ್ನಾಟಕ ಶರಣ ಸಾಹಿತ್ಯ ಪರಿಷತ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT