ಬೆಂಗಳೂರು: ‘ಹಿರಿಯರ ಯೋಗಕ್ಷೇಮ ಮತ್ತು ಅವರ ಕಾಳಜಿಯನ್ನು ವಹಿಸುವುದು ಯುವಕರ ಕರ್ತವ್ಯವಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.
ಹೆಲ್ಪ್ ಏಜ್ ಇಂಡಿಯಾ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜ ಸೇವಾಕಾರ್ಯ ವಿಭಾಗವು ಸೆಂಟ್ರಲ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಹಗ್’ ಅಭಿಯಾನಕ್ಕೆ ಚಾಲನೆ ಮತ್ತು ‘ದಿ ಜರ್ನಿ ಆಫ್ ಹೆಲ್ಪ್ ಏಜ್ ಇಂಡಿಯಾ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮಕ್ಕಳನ್ನು ಪ್ರೀತಿಯಿಂದ ಸಾಕಿ, ಸಲುಹಿ, ವಿದ್ಯಾಭ್ಯಾಸ ನೀಡಿದ ಪೋಷಕರು ತಮ್ಮ ಕೊನೆಗಾಲದಲ್ಲಿ ಏಕಾಂಗಿಯಾಗಿ ಜೀವನ ನಡೆಸಬೇಕಾಗಿದೆ. ಮಕ್ಕಳು ರೆಕ್ಕೆ ಬಲಿತ ಹಕ್ಕಿಗಳಂತೆ ತಮ್ಮ ಭವಿಷ್ಯವನ್ನು ಅರಸಿಕೊಂಡು ವಿದೇಶಗಳಿಗೆ ಹೋಗಿ ನೆಲೆಸುತ್ತಾರೆ. ದೇಶದಲ್ಲಿ ಹಿರಿಯರ ಪರಿಸ್ಥಿತಿ ಶೋಚನೀಯವಾಗಿದೆ’ ಎಂದು ವಿಷಾದಿಸಿದರು.
‘ಮಕ್ಕಳು ತಮ್ಮ ಹಿರಿಯರ ಕುರಿತು ವಹಿಸಬೇಕಾದ ಕಾಳಜಿಯನ್ನು ಇಂದು ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಿಸುತ್ತಿವೆ. ಸಮಾಜದ ಸಂಸ್ಕೃತಿಯೇ ಒಡೆದುಹೋಗುತ್ತಿದೆ. ಸಮಾಜವು ಇಂದು ಅಶಾಂತಿಯ ಬೀಡಾಗಿದೆ. ಎಲ್ಲ ಮಕ್ಕಳು ತಮ್ಮ ಕರ್ತವ್ಯಗಳನ್ನು ಅರಿತು ನಡೆಯಬೇಕು. ಕೊನೆಗಾಲದಲ್ಲಿ ಹಿರಿಯರನ್ನು ಪ್ರೀತಿಯಿಂದ ನಡೆಸಿಕೊಳ್ಳಬೇಕು’ ಎಂದರು. ಸಿಬಿಆರ್ ನೆಟ್ವರ್ಕ್ನ `ಪ್ರಾದೇಶಿಕ ಸಲಹೆಗಾರ್ತಿ ಇಂದುಮತಿ ರಾವ್ ಮಾತನಾಡಿ, ‘ಸರ್ಕಾರವು ಅಭಿವೃದ್ಧಿ ಬಜೆಟ್ನಲ್ಲಿ ಶೇ 10 ರಷ್ಟು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ
ಮೀಸಲಿಡಬೇಕು’ ಎಂದರು.
‘ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ಹಿರಿಯ ನಾಗರಿಕರ ಸಂಪೂರ್ಣ ಮಾಹಿತಿಯೊಂದಿಗೆ ನೋಂದಣಿ ಮಾಡಬೇಕು. ಇದರಿಂದ, ಹಿರಿಯ ನಾಗರಿಕರ ಸಂಖ್ಯಾ ಪ್ರಮಾಣ ತಿಳಿಯುತ್ತದೆ’ ಎಂದರು.‘ಇದುವರೆಗೂ ನಮ್ಮ ದೇಶದಲ್ಲಿನ ಹಿರಿಯರ ಪ್ರಮಾಣದ ಕುರಿತು ಯಾವುದೇ ದತ್ತಾಂಶಗಳು ಪ್ರಕಟಣೆಯಾಗಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.