ADVERTISEMENT

ನೆಲಮಂಗಲದಲ್ಲಿ 100 ಹಾಸಿಗೆಗಳ ಆಸ್ಪತ್ರೆ: ಸಚಿವ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 6 ಮೇ 2025, 16:13 IST
Last Updated 6 ಮೇ 2025, 16:13 IST
ನೆಲಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿನೇಶ್‌ ಗುಂಡುರಾವ್‌ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಎನ್‌.ಶ್ರೀನಿವಾಸ್‌,  ಡಾ.ಸೋನಿಯಾ, ಪ್ರದೀಪ್‌, ಡಿ.ಎಚ್. ಬೈರೇಗೌಡ ಉಪಸ್ಥಿತರಿದ್ದರು
ನೆಲಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿನೇಶ್‌ ಗುಂಡುರಾವ್‌ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಎನ್‌.ಶ್ರೀನಿವಾಸ್‌,  ಡಾ.ಸೋನಿಯಾ, ಪ್ರದೀಪ್‌, ಡಿ.ಎಚ್. ಬೈರೇಗೌಡ ಉಪಸ್ಥಿತರಿದ್ದರು   

ನೆಲಮಂಗಲ: ತಾಲ್ಲೂಕಿಗೆ ಸುಸಜ್ಜಿತ ನೂರು ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಮಂಜೂರಾಗಿದ್ದು, ಕಳೆದ ಸಾಲಿನ ಬಜೆಟ್‌ನಲ್ಲೇ ₹42 ಕೋಟಿ ಹೆಚ್ಚುವರಿ ಅನುದಾನ ಮೀಸಲಿರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡರಾವ್‌ ತಿಳಿಸಿದರು.

ತಾಲ್ಲೂಕಿನ ಟಿ.ಬೇಗೂರು ಬಳಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದ ಅವರು, ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆಯನ್ನು ಶೀಘ್ರದಲ್ಲೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಎನ್‌.ಶ್ರೀನಿವಾಸ್‌ ಮಾತನಾಡಿ, ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ತುರ್ತಾಗಿ ಕಾಮಗಾರಿ ಪ್ರಾರಂಭಿಸಲು ಹಾಗೂ ವೈದ್ಯರ ಕೊರತೆಯನ್ನು ನೀಗಿಸಲು ಸಚಿವರಲ್ಲಿ ಮನವಿ ಮಾಡಿದರು.

ADVERTISEMENT

ಇದೇ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ‘ಚಿಕಿತ್ಸೆ ಸರಿಯಾಗಿ ದೊರೆಯುತ್ತಿದೆಯೆ’ ಎಂದು ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

ಆಡಳಿತ ವೈದ್ಯಾಧಿಕಾರಿ ಡಾ.ಸೋನಿಯಾ ಅವರು, ಮೂರು ತುರ್ತು ಚಿಕಿತ್ಸಾ ವೈದ್ಯರ ಕೊರತೆ ಇದೆ. ಸ್ಥಳೀಯರಷ್ಟೆ ಅಲ್ಲದೆ ಮಾಗಡಿ ತಾಲ್ಲೂಕಿನ ಸೋಲೂರು, ಬೆಂಗಳೂರು ಉತ್ತರ ತಾಲ್ಲೂಕಿನ ಮಾಕಳಿ ಹಾಗು ಸುತ್ತಮುತ್ತಲ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತುರ್ತು ಚಿಕಿತ್ಸೆಗಳಿಗಾಗಿ ರೋಗಿಗಳು ಬರುತ್ತಿದ್ದಾರೆ. ಅವರಿಗೆ ಅಗತ್ಯ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿಯೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಮಸ್ಯೆಗಳ ಪಟ್ಟಿ ಮಾಡಿ ಶಾಸಕರ ಮುಖಾಂತರ ಪತ್ರ ಬರೆಯುವಂತೆ ತಿಳಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಶೀಘ್ರ ಪರಿಹಾರ ನೀಡಿ, ಅಗತ್ಯವಿರುವ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ವೈದ್ಯರನ್ನು ನೇಮಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅಧಿಕಾರ ನೀಡಿದ್ದು, ಕಾರ್ಯೋನ್ಮುಖರಾಗಲು ಡಿಎಚ್‌ಒ ಕೃಷ್ಣರೆಡ್ಡಿ ಸೂಚಿಸಿದರು.

108 ಆಂಬುಲೆನ್ಸ್‌ ದುರ್ಬಳಕೆಯಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ತುರ್ತು ಚಿಕಿತ್ಸೆಗಳಿಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ರವಾನಿಸಿರಬಹುದು.  ಉದ್ದೇಶಪೂರ್ವಕವಾಗಿಯೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದರೆ ಮಾಹಿತಿ ನೀಡಿ. ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್‌.ಗಣೇಶ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಆರ್‌.ಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಜ್ರಘಟ್ಟ ನಾಗರಾಜು, ಮುಖಂಡ ಎಂ.ಕೆ.ನಾಗರಾಜು, ವಕೀಲ ಕೇಶವಮೂರ್ತಿ, ನಗರಸಭೆ ಸದಸ್ಯರಾದ ಪ್ರದೀಪ್‌, ಸುನೀಲ್‌ ಮೂಡ್‌, ಪೂರ್ಣಿಮಾ ಸುಗ್ಗರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.