ADVERTISEMENT

6 ತಿಂಗಳಿನಲ್ಲಿ 113 ಮೊಬೈಲ್ ಸುಲಿಗೆ: ವಿವೇಕನಗರ ಪೊಲೀಸರಿಂದ ಮೂವರ ಬಂಧನ

ವಿವೇಕನಗರ ಪೊಲೀಸರಿಂದ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 22:22 IST
Last Updated 21 ಮಾರ್ಚ್ 2023, 22:22 IST
ವಿವೇಕನಗರ ಠಾಣೆ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಬೈಕ್‌ಗಳು ಹಾಗೂ ಮೊಬೈಲ್‌ಗಳು
ವಿವೇಕನಗರ ಠಾಣೆ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಬೈಕ್‌ಗಳು ಹಾಗೂ ಮೊಬೈಲ್‌ಗಳು   

ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನ ಹಾಗೂ ಮೊಬೈಲ್ ಸುಲಿಗೆ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪಾದರಾಯನಪುರ ಗೋರಿಪಾಳ್ಯದ ಸುಹೇಲ್ (20), ಸಾಕಿಬ್ (19) ಹಾಗೂ ಮೊಹಮ್ಮದ್ ಸಕ್ಲೇನ್ (23) ಬಂಧಿತರು. ಇವರಿಂದ ₹ 40.38 ಲಕ್ಷ ಮೌಲ್ಯದ ಎರಡು ದ್ವಿಚಕ್ರವಾಹನ ಹಾಗೂ 113 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೋರಮಂಗಲದ ಎಸ್.ಟಿ. ಬೆಡ್ ಬಡಾವಣೆ ನಿವಾಸಿಯೊಬ್ಬರ ಮೊಬೈಲ್ ಸುಲಿಗೆ ಮಾಡಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದು ತಿಳಿಸಿದರು.

ADVERTISEMENT

ಕದ್ದ ಬೈಕ್‌ನಲ್ಲಿ ಸುತ್ತಾಟ: ‘ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಪಲ್ಸರ್ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳು, ಅದರಲ್ಲೇ ನಗರದ ಹಲವೆಡೆ ಸುತ್ತಾಡುತ್ತಿದ್ದರು. ರಸ್ತೆಯಲ್ಲಿ ಮಾತನಾಡಿಕೊಂಡು ಹೋಗುವ ಜನರನ್ನು ಹಿಂಬಾಲಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಕೆಲವೆಡೆ ಜನರನ್ನು ಬೆದರಿಸಿ ಮೊಬೈಲ್ ಸುಲಿಗೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆರು ತಿಂಗಳ ಅವಧಿಯಲ್ಲಿ 113 ಮೊಬೈಲ್‌ಗಳನ್ನು ಆರೋಪಿಗಳು ಸುಲಿಗೆ ಮಾಡಿದ್ದರು. ವಿವೇಕನಗರ, ಕಬ್ಬನ್ ಪಾರ್ಕ್, ಆಡುಗೋಡಿ, ಅಶೋಕನಗರ, ವಿಲ್ಸನ್ ಗಾರ್ಡನ್ ಹಾಗೂ ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಜಪ್ತಿ ಮಾಡಿದ ಮೊಬೈಲ್‌ಗಳಲ್ಲಿ ಐ–ಫೋನ್‌ಗಳು ಹೆಚ್ಚಿವೆ’ ಎಂದು ತಿಳಿಸಿದರು.

‘ಕದ್ದ ಮೊಬೈಲ್‌ಗಳನ್ನು ಮಾರುತ್ತಿದ್ದ ಆರೋಪಿಗಳು, ಬಂದ ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು. ಇವರು ಮತ್ತಷ್ಟು ಕಡೆ ಮೊಬೈಲ್ ಸುಲಿಗೆ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.