ಬೆಂಗಳೂರು: `ನಗರದ ವಿವಿಧೆಡೆ ಅತಿಕ್ರಮಣಗೊಂಡಿದ್ದ ರೂ. 122 ಕೋಟಿ ಮೊತ್ತದ ಸಾರ್ವಜನಿಕ ಆಸ್ತಿಯನ್ನು ಕಳೆದ ಹತ್ತು ತಿಂಗಳ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿದೆ~ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಬೆಂಗಳೂರು ಮಹಾನಗರ ಕಾರ್ಯ ಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮಾ ತಿಳಿಸಿದರು.
ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ವರ್ಷ ಇಲ್ಲಿಯವರೆಗೆ 194 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 44 ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಉಳಿದವು ತನಿಖೆ ಹಂತದಲ್ಲಿವೆ~ ಎಂದು ಹೇಳಿದರು.
`ಸುತಗಂಟ್ಯ ಪಾಳ್ಯದಲ್ಲಿ ಅತಿಕ್ರ ಮಣಗೊಂಡಿದ್ದ ರೂ 60 ಕೋಟಿ ಮೌಲ್ಯದ 1.25 ಎಕರೆ ಬಿಬಿಎಂಪಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿವಿಧೆಡೆ ಖಾಸಗಿ ವ್ಯಕ್ತಿಗಳ ಪಾಲಾಗಿದ್ದ ರೂ 62 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನೂ ಪತ್ತೆ ಹಚ್ಚಲಾಗಿದೆ~ ಎಂದು ವಿವರಿಸಿದರು.
`ಬಿಎಂಟಿಎಫ್ ಸ್ಥಾಪನೆಯಾದ ದಿನದಿಂದ ಕಳೆದ ವರ್ಷದ ಅಂತ್ಯದವರೆಗೆ ಅನ್ಯರ ಪಾಲಾಗಿದ್ದ ರೂ 3,000 ಕೋಟಿ ಮೌಲ್ಯದ ಸರ್ಕಾರದ ಆಸ್ತಿ ಪತ್ತೆ ಮಾಡಲಾಗಿದೆ~ ಎಂದ ತಿಳಿಸಿದರು. `60 ಎಕರೆ ವಿಸ್ತೀರ್ಣದ ಒಡೆಯರಹಳ್ಳಿ ಕೆರೆಯ ಅತಿಕ್ರಮಣವನ್ನು ತಡೆಗಟ್ಟಲಾಗಿದ್ದು, ಅಲ್ಲಿ ನಡೆಯುತ್ತಿದ್ದ ಮರಳು ದಂಧೆಯನ್ನೂ ನಿಲ್ಲಿಸಲಾಗಿದೆ. ಈ ದಂಧೆಯ ಹಿಂದೆ ಹಲವರ ಕೈವಾಡ ಇದೆ~ ಎಂದು ಹೇಳಿದರು.
`ಪ್ರಸಕ್ತ ವರ್ಷ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ 558 ಪ್ರಕರಣಗಳು ದಾಖಲಾಗಿದ್ದು, ಅವುಗಳ ತನಿಖೆ ನಡೆಸಲಾಗುತ್ತಿದೆ~ ಎಂದು ಮಾಹಿತಿ ನೀಡಿದರು.
ದೊಡ್ಡಗುಬ್ಬಿಯ ತಮ್ಮ ಒಡೆತನದ ಜಾಗೆಯಲ್ಲಿ ಪಾಲಿಕೆ ಎಂಜಿನಿಯರ್ಗಳು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಚಿವ ಎಸ್.ಸುರೇಶಕುಮಾರ್ ವಿರುದ್ಧ ದಾಖಲಾದ ಪ್ರಕರಣದ ಕುರಿತೂ ಪ್ರತಿಕ್ರಿಯಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.