ADVERTISEMENT

122 ಕೋಟಿ ಮೊತ್ತದ ಅತಿಕ್ರಮಿತ ಆಸ್ತಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 18:40 IST
Last Updated 7 ನವೆಂಬರ್ 2012, 18:40 IST

ಬೆಂಗಳೂರು: `ನಗರದ ವಿವಿಧೆಡೆ ಅತಿಕ್ರಮಣಗೊಂಡಿದ್ದ ರೂ. 122 ಕೋಟಿ ಮೊತ್ತದ ಸಾರ್ವಜನಿಕ ಆಸ್ತಿಯನ್ನು ಕಳೆದ ಹತ್ತು ತಿಂಗಳ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿದೆ~ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಬೆಂಗಳೂರು ಮಹಾನಗರ ಕಾರ್ಯ ಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮಾ ತಿಳಿಸಿದರು.

ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ವರ್ಷ ಇಲ್ಲಿಯವರೆಗೆ 194 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 44 ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಉಳಿದವು ತನಿಖೆ ಹಂತದಲ್ಲಿವೆ~ ಎಂದು ಹೇಳಿದರು.

`ಸುತಗಂಟ್ಯ  ಪಾಳ್ಯದಲ್ಲಿ ಅತಿಕ್ರ ಮಣಗೊಂಡಿದ್ದ  ರೂ 60 ಕೋಟಿ  ಮೌಲ್ಯದ 1.25  ಎಕರೆ ಬಿಬಿಎಂಪಿ  ಭೂಮಿಯನ್ನು   ವಶಕ್ಕೆ ಪಡೆಯಲಾಗಿದ್ದು, ವಿವಿಧೆಡೆ ಖಾಸಗಿ ವ್ಯಕ್ತಿಗಳ ಪಾಲಾಗಿದ್ದ ರೂ 62 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನೂ ಪತ್ತೆ ಹಚ್ಚಲಾಗಿದೆ~ ಎಂದು ವಿವರಿಸಿದರು.

`ಬಿಎಂಟಿಎಫ್ ಸ್ಥಾಪನೆಯಾದ ದಿನದಿಂದ ಕಳೆದ ವರ್ಷದ ಅಂತ್ಯದವರೆಗೆ ಅನ್ಯರ ಪಾಲಾಗಿದ್ದ ರೂ 3,000 ಕೋಟಿ ಮೌಲ್ಯದ ಸರ್ಕಾರದ ಆಸ್ತಿ ಪತ್ತೆ ಮಾಡಲಾಗಿದೆ~ ಎಂದ ತಿಳಿಸಿದರು. `60 ಎಕರೆ ವಿಸ್ತೀರ್ಣದ ಒಡೆಯರಹಳ್ಳಿ ಕೆರೆಯ ಅತಿಕ್ರಮಣವನ್ನು ತಡೆಗಟ್ಟಲಾಗಿದ್ದು, ಅಲ್ಲಿ ನಡೆಯುತ್ತಿದ್ದ ಮರಳು ದಂಧೆಯನ್ನೂ ನಿಲ್ಲಿಸಲಾಗಿದೆ. ಈ ದಂಧೆಯ ಹಿಂದೆ ಹಲವರ ಕೈವಾಡ ಇದೆ~ ಎಂದು ಹೇಳಿದರು.

`ಪ್ರಸಕ್ತ ವರ್ಷ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ 558 ಪ್ರಕರಣಗಳು ದಾಖಲಾಗಿದ್ದು, ಅವುಗಳ ತನಿಖೆ ನಡೆಸಲಾಗುತ್ತಿದೆ~ ಎಂದು ಮಾಹಿತಿ ನೀಡಿದರು.

ದೊಡ್ಡಗುಬ್ಬಿಯ ತಮ್ಮ ಒಡೆತನದ ಜಾಗೆಯಲ್ಲಿ ಪಾಲಿಕೆ ಎಂಜಿನಿಯರ್‌ಗಳು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಚಿವ ಎಸ್.ಸುರೇಶಕುಮಾರ್ ವಿರುದ್ಧ ದಾಖಲಾದ ಪ್ರಕರಣದ ಕುರಿತೂ ಪ್ರತಿಕ್ರಿಯಿಸಲಿಲ್ಲ.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT