ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ವಾಯು ಗುಣಮಟ್ಟ ಸುಧಾರಿಸಲು 11 ಚಟುವಟಿಕೆಗಳ ಕ್ರಿಯಾಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
2021–22ನೇ ಸಾಲಿಗೆ ನಿಗದಿಯಾಗಿದ್ದ ₹140 ಕೋಟಿ ಅನುದಾನದಲ್ಲಿ ಯೋಜನೆಗಳನ್ನು ಸಿದ್ಧಪಡಿಸಿ ಬಿಬಿಎಂಪಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಅನುದಾನವನ್ನು 2021–2026ರ ಅವಧಿಯಲ್ಲಿ ಉಪಯೋಗಿಸಿಕೊಳ್ಳಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರಿಗೆ ಇಲಾಖೆ, ಸಂಚಾರ ಪೊಲೀಸ್ ಸೇರಿ ವಿವಿಧ ಇಲಾಖೆಗಳಿಗೆ ಅನುದಾನ ಬಿಡುಗಡೆ ಆಗಲಿದೆ. ಅದರಂತೆ ಬಿಬಿಎಂಪಿ ಸೂಕ್ಷ್ಮ ಮಟ್ಟದ ಕ್ರಿಯಾಯೋಜನೆ (ಮೈಕ್ರೊ–ಪ್ಲಾನ್) ಸಿದ್ಧಪಡಿಸಿದೆ.
ಈ ಕ್ರಿಯಾಯೋಜನೆಗೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರ, 12 ಷರತ್ತುಗಳನ್ನು ವಿಧಿಸಿದೆ. ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ಪಡೆಯಬೇಕು, ಕೆಟಿಪಿಪಿ ನಿಯಮಗಳನ್ವಯ ಇ–ಪ್ರೊಕ್ಯೂರ್ಮೆಂಟ್ ಮೂಲಕವೇ ಟೆಂಡರ್ ಆಹ್ವಾನಿಸಬೇಕು. ಟೆಂಡರ್ಗೆ ಅನುಮೋದನೆ ಪಡೆದು ಅನುಷ್ಠಾನಗೊಳಿಸಬೇಕು.
ಕ್ರಿಯಾಯೋಜನೆಯಲ್ಲಿರುವ ಕಾಮಗಾರಿಗಳನ್ನು ಇತರೆ ಯೋಜನೆಗಳಲ್ಲಿ ಪರಿಗಣಿಸಿರಬಾರದು. ಅನುಮೋದಿತ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸರ್ಕಾರಿಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು. ಎಲ್ಲ ಕಾಮಗಾರಿಗಳು ಉತ್ತಮ ಗುಣಮಟ್ಟದ್ದಾಗಿರುವಂತೆ ಬಿಬಿಎಂಪಿ ಖಾತರಿಪಡಿಸಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಚಟುವಟಿಕೆ ಪೂರ್ಣಗೊಳ್ಳಬೇಕು.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ವಾರ್ಷಿಕ ಗುರಿ ಸಾಧಿಸಲು ಕ್ರಮ ಕೈಗೊಳ್ಳಬೇಕು. ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸಬೇಕು. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದರೆ ಸರ್ಕಾರದಿಂದ ಅನುಮೋದನೆ ಪಡೆಯಬೇಕು. ಅನುಷ್ಠಾನಗೊಳಿಸುವ ಇಲಾಖೆಗಳಿಗೆ ಹಣ ವರ್ಗಾಯಿಸಬೇಕು. ಕಾಮಗಾರಿಗಳ ಅನುಷ್ಠಾನದ ಬಗ್ಗೆ ಪ್ರತಿ ತ್ರೈಮಾಸಿಕದ ವರದಿಯನ್ನು ಸರ್ಕಾರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.