ADVERTISEMENT

147 ಮಂದಿಗೆ ಹಕ್ಕು ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 20:07 IST
Last Updated 7 ಮಾರ್ಚ್ 2018, 20:07 IST
ಫಲಾನುಭವಿಗಳಿಗೆ ಸೋಮಶೇಖರ್‌ ಹಕ್ಕುಪತ್ರ ವಿತರಿಸಿದರು
ಫಲಾನುಭವಿಗಳಿಗೆ ಸೋಮಶೇಖರ್‌ ಹಕ್ಕುಪತ್ರ ವಿತರಿಸಿದರು   

ಬೆಂಗಳೂರು: ಹಕ್ಕುಪತ್ರಕ್ಕಾಗಿ 20 ವರ್ಷಗಳಿಂದ ಅಲೆದಾಡುತ್ತಿದ್ದ ಉಲ್ಲಾಳ ಉಪನಗರದ ಜನರ ಮೊಗದಲ್ಲಿ ಸಂತಸ ಮನೆಮಾಡಿತ್ತು. ಕೊನೆಗೂ ಪತ್ರ ಕೈಸೇರಿತಪ್ಪ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಇದು ಕಂಡುಬಂದದ್ದು ಶಾಸಕ ಎಸ್‌.ಟಿ. ಸೋಮಶೇಖರ್‌ ಅವರು ಬುಧವಾರ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ.

ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ 94 ಸಿ.ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ. ಅದರ ಭಾಗವಾಗಿ ಈ ಪ್ರದೇಶದ 147 ಜನರಿಗೆ ಹಕ್ಕುಪತ್ರ ವಿತರಿಸಲಾಯಿತು. ಹಂತ ಹಂತವಾಗಿ ಎಲ್ಲರಿಗೂ ಪತ್ರ ನೀಡಲಾಗುವುದು ಎಂದು ಸೋಮಶೇಖರ್‌ ತಿಳಿಸಿದರು.

ADVERTISEMENT

ತಹಶೀಲ್ದಾರ್, ಕಂದಾಯ ನಿರೀಕ್ಷಕರ ಸತತ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಜನರ ಸಮಸ್ಯೆಗೆ ಎಲ್ಲಾ ಅಧಿಕಾರಿಗಳು ಸ್ಪಂದಿಸಿದಾಗ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪುತ್ತವೆ ಎಂದರು.

‘ಐದು ವರ್ಷಗಳಿಂದ ಜನರ ಸಮಸ್ಯೆಗೆ ಸ್ಪಂದಿಸದ ವಿರೋಧ ಪಕ್ಷದವರು ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಧರ್ಮಸ್ಥಳ, ಮಂತ್ರಾಲಯಗಳಿಗೆ ಜನರನ್ನು ಪ್ರವಾಸ ಕಳುಹಿಸುತ್ತಿದ್ದಾರೆ. ಆಮಿಷ ನೀಡುವ ಅಂತಹವರಿಗೆ ಜನರು ತಕ್ಕ ಪಾಠ ಕಲಿಸಬೇಕು. ಕ್ಷೇತ್ರದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಫಲಾನುಭವಿಗಳಾದ ಸರೋಜ ಮತ್ತು ಶಾಂತ, ‘ಬಿಡಿಎ ಬಡಾವಣೆಯಂತೆಯೇ ನಮ್ಮ ಪ್ರದೇಶಕ್ಕೆ ಕುಡಿಯುವ ನೀರು, ಒಳಚರಂಡಿ, ರಸ್ತೆ ಡಾಂಬರೀಕರಣ ಸೌಲಭ್ಯ ಕಲ್ಪಿಸಿ, ಅಭಿವೃದ್ಧಿಪಡಿಸಿದ್ದಾರೆ. ನೆಮ್ಮದಿಯ ಜೀವನ ಸಾಗಿಸಲು ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿದ್ದಾರೆ’ ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.