ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್) ಒಂದು ತಿಂಗಳ ಅವಧಿಯಲ್ಲಿ ₹ 15 ಕೋಟಿ ಆಸ್ತಿ ತೆರಿಗೆ ಪಾವತಿ
ಸುವಂತೆ ಹೈಕೋರ್ಟ್ ಆದೇಶಿಸಿದೆ. ಈ ಮೊತ್ತವನ್ನು ಸ್ಥಳೀಯ ಪಂಚಾಯಿತಿಗೆ ಒಂದು ತಿಂಗಳಿನಲ್ಲಿ ಠೇವಣಿ ಇರಿಸುವಂತೆ ನಿರ್ದೇಶಿಸಲಾಗಿದೆ.
ದೇವನಹಳ್ಳಿ ತಾಲ್ಲೂಕಿನ ಅಣ್ಣೇಶ್ವರ, ಬೆಟ್ಟಕೋಟೆ, ದೊಡ್ಡಜಾಲ ಮತ್ತು ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗಳು ವಿಧಿಸಿರುವ ತೆರಿಗೆ ಪ್ರಶ್ನಿಸಿ ಬಿಐಎಎಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಬಿಐಎಎಲ್ ತನ್ನ ಸುಪರ್ದಿಯಲ್ಲಿರುವ ಪ್ರದೇಶದಲ್ಲಿ ಗುತ್ತಿಗೆ ಮತ್ತು ಬಾಡಿಗೆ ನೀಡಿರುವ ಕಟ್ಟಡಗಳ ಮೇಲಿನ ವಾರ್ಷಿಕ ಆಸ್ತಿ ತೆರಿಗೆಯಲ್ಲಿ ₹ 80 ಕೋಟಿ ಬಾಕಿ ಉಳಿಸಿಕೊಂಡಿದೆ. ಯಾವ ಕಟ್ಟಡಗಳನ್ನು ಯಾವ ರೀತಿ ವಾಣಿಜ್ಯ ಬಳಕೆಗೆ ನೀಡಿದೆ ಎಂಬ ವಿವರಗಳನ್ನು ಬಿಐಎಎಲ್ ಸರ್ಕಾರಕ್ಕೆ ನೀಡಿಲ್ಲ. ಹೀಗಾಗಿ ಸ್ಥಳೀಯ ಪಂಚಾಯಿತಿಗಳು ಗ್ರಾಮ ಸ್ವರಾಜ್ ಕಾಯ್ದೆ 199ರ ಪ್ರಕಾರ ಈ ತೆರಿಗೆ ವಿಧಿಸಿವೆ. ಇದನ್ನು ಪ್ರಶ್ನಿಸಿರುವ ಕಂಪೆನಿಯ ಕ್ರಮದಲ್ಲಿ ಹುರುಳಿಲ್ಲ’ ಎಂದರು.
‘ವಿಮಾನ ನಿಲ್ದಾಣ ಅಭಿವೃದ್ಧಿಗೊಳ್ಳಲಿ ಎಂದು ಪಂಚಾಯಿತಿಗಳು 2010ರವರೆಗೂ ಬಿಐಎಎಲ್ನಿಂದ ಯಾವುದೇ ತೆರಿಗೆ ಸಂಗ್ರಹ ಮಾಡಿರಲಿಲ್ಲ. ಆದರೆ, 2010–11ರಿಂದ ಈತನಕ ಪಾವತಿ ಮಾಡಬೇಕಿರುವ ಮೊತ್ತದಲ್ಲಿ ಬಿಐಎಎಲ್ ₹ 7.32 ಕೋಟಿ ಪಾವತಿ ಮಾಡಿದೆ’ ಎಂದು ಪೊನ್ನಣ್ಣ ವಿವರಿಸಿದರು.
ಮಾರ್ಗದರ್ಶಿ ಸೂತ್ರ ರೂಪಿಸಿ: ‘ಪಂಚಾಯಿತಿಗಳು ತೆರಿಗೆ ವಿಧಿಸುವ ಕುರಿತಂತೆ ಮುಂದಿನ ಮೂರು ತಿಂಗಳಿನಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿ’ ಎಂದು ನ್ಯಾಯಪೀಠವು ಪೊನ್ನಣ್ಣ ಅವರಿಗೆ ನಿರ್ದೇಶಿಸಿತು. ವಿಚಾರಣೆಯನ್ನು 2018ರ ಏಪ್ರಿಲ್ 2ಕ್ಕೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.