ಬೆಂಗಳೂರು: 57 ವರ್ಷ ವಯಸ್ಸಿನ ವಸುಮತಿ ಶ್ರೀನಿವಾಸನ್ ಮೂರು ಸಾವಿರ ಕಿ.ಮೀ. ದೂರ ಸೈಕಲ್ ತುಳಿದು ಪ್ರಯಾಣಿಸುತ್ತಾರೆ ಎಂಬ ವಿಷಯ ಅಚ್ಚರಿ ಮೂಡಿಸಬಹುದು. ಆದರೆ ಇದು ನಿಜ. ಈ ಸಾಹಸಕ್ಕೆ ಸಾಥ್ ನೀಡಿದ್ದು 14 ಮಂದಿ ಧೀರ ಮಹಿಳೆಯರು. ಇದರಲ್ಲಿ 75 ವರ್ಷ ವಯಸ್ಸಿನ ಮಹಿಳೆಯೊಬ್ಬರೂ ಇದ್ದಾರೆ ಎನ್ನುವುದು ವಿಶೇಷ!
‘ಗೋ ಗ್ರೀನ್ ಗರ್ಲ್ಸ್’ ಎಂಬ ಹೆಸರಿನ ಈ ಮಹಿಳೆಯರ ತಂಡ ಜನವರಿ 26ರಿಂದ ಫೆಬ್ರುವರಿ 28ರವರೆಗೆ ಕೋಲ್ಕತ್ತದಿಂದ ಕನ್ಯಾಕುಮಾರಿವರೆಗೆ ‘ವಿಮೆನ್ ಅಡ್ವೆಂಚರ್ ನೆಟ್ವರ್ಕ್ ಆಫ್ ಇಂಡಿಯಾ’ (ವಾಣಿ) ಆಯೋಜಿಸಿದ್ದ ಸುಮಾರು ಮೂರು ಸಾವಿರ ಕಿ.ಮೀ. ‘ಸೈಕ್ಲಿಂಗ್ ಸಾಹಸ ಯಾತ್ರೆ’ಯನ್ನು ಯಶಸ್ವಿಯಾಗಿ ಪೂರೈಸಿ ಬಂದಿದೆ.
ಬುಧವಾರ ರಾತ್ರಿ ಕರ್ನಾಟಕ ಮೌಂಟೇನಿಯರಿಂಗ್ ಸಂಸ್ಥೆಯು ಉದ್ಯಾನ ನಗರಿಯಲ್ಲಿ ಈ ಸಾಹಸಿ ಮಹಿಳೆಯರನ್ನು ಆತ್ಮೀಯವಾಗಿ ಸ್ವಾಗತಿಸಿತು. ಸಾಹಸ ಯಾತ್ರೆಯಲ್ಲಿ ಬೆಂಗಳೂರಿನ ಮೂವರು ಮಹಿಳೆಯರು ಇದ್ದರು.
‘ಹಸಿರು, ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಈ ಸೈಕ್ಲಿಂಗ್ ಯಾತ್ರೆಯ ಉದ್ದೇಶ. ಜೊತೆಗೆ ಹೊಸ ಸಾಹಸಕ್ಕೆ ಯುವ ಮಹಿಳೆಯರನ್ನು ಉತ್ತೇಜಿಸಬೇಕು ಹಾಗೂ ಅವರಿಗೆ ಸ್ಫೂರ್ತಿಯಾಗಬೇಕು ಎಂಬುದು ನಮ್ಮ ನಿಲುವು’ ಎಂದು ತಂಡದ ನಾಯಕಿ ಕೂಡ ಆಗಿರುವ ಬೆಂಗಳೂರಿನ ವಸುಮತಿ ‘ಪ್ರಜಾವಾಣಿ’ಗೆ ತಿಳಿಸಿದರು.
35 ದಿನ ನಡೆದ ಸಾಹಸ ಯಾತ್ರೆಯಲ್ಲಿ ಈ ಮಹಿಳೆಯರು ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಮೂಲಕ ಕನ್ಯಾಕುಮಾರಿ ತಲುಪಿದ್ದಾರೆ. ದಿನನಿತ್ಯ ಸುಮಾರು 100 ಕಿ.ಮೀ. ಸೈಕಲ್ ಪೆಡಲ್ ತುಳಿದಿದ್ದಾರೆ.
‘ಈ ದಿನಗಳಲ್ಲಿ ನಾವೇ ದಾರಿ ಮಧ್ಯೆ ಟೆಂಟ್ ಕಟ್ಟಿ, ಅಡುಗೆ ಮಾಡಿಕೊಂಡೆವು. ಜೊತೆಗೆ ರೋಟರಿ ಸಂಸ್ಥೆಯಿಂದ ಕೂಡ ತುಂಬಾ ಸಹಾಯ ಸಿಗುತ್ತಿತ್ತು’ ಎನ್ನುತ್ತಾರೆ ವಸುಮತಿ.
ಬೆಂಗಳೂರಿನ ಸ್ಮಿತಾ ಶ್ರೀನಿವಾಸನ್, ಸ್ನೇಹಾ ಸುಬ್ರಹ್ಮಣ್ಯ, ವಡೋದರದ ಗಂಗೋತ್ರಿ, ಭಗವತಿ, ನಾಗಪುರದ ಬಿಮ್ಲಾ ನೇಗಿ, ನೀರ್ಜಾ ಪಠಾನಿಯಾ, ದೆಹಲಿಯ ರೀನಾ, ಪುಣೆಯ ಕೃಷ್ಣಾ ಪಾಟೀಲ್, ದೀಪಾ, ಡೆಹ್ರಾಡೂನ್ನ ಕವಿತಾ, ಹೃಶಿಕೇಶ್ನ ರೂಪಾ, ಕೋಲ್ಕತ್ತದ ಲಿಪಿಕಾ, ನೈನಿತಾಲ್ನ ಸೋನಿ ಶಾ ಹಾಗೂ ಮನಾಲಿಯ ಕೃಷ್ಣಾ ಠಾಕೂರ್ ಈ ತಂಡದಲ್ಲಿದ್ದರು. ಸಮಾರಂಭದಲ್ಲಿ ಹಾಜರಿದ್ದ ಇವರು ತಮ್ಮ ಅನುಭವ ಹಂಚಿಕೊಂಡರು.
ಸ್ವಾಗತ ಸಮಾರಂಭದಲ್ಲಿ ಕರ್ನಾಟಕ ಮೌಂಟೇನಿಯರಿಂಗ್ ಸಂಸ್ಥೆ ಅಧ್ಯಕ್ಷ ಎಸ್.ಕೆ.ಮೆಹ್ತಾ, ಕಾರ್ಯದರ್ಶಿ ಎಸ್.ಶ್ರೀವತ್ಸ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.