ಬೆಂಗಳೂರು: 2ಜಿ ಸ್ಪೆಕ್ಟ್ರಂ ಹಗರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ (ಎಬಿವಿಪಿ) ಸದಸ್ಯರು ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರೊ. ಪಿ.ವಿ.ಕೃಷ್ಣಭಟ್, ‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.ಯುಪಿಎ ಸರ್ಕಾರದ ಅವಧಿಯಲ್ಲಿ 2ಜಿ ಸ್ಪೆಕ್ಟ್ರಂ, ಭೋಪಾಲ್ ಅನಿಲ ದುರಂತ, ಕಾಮನ್ವೆಲ್ತ್ ಹಗರಣಗಳು ಸೇರಿದಂತೆ ಹಲವು ಅಕ್ರಮಗಳು ನಡೆದಿವೆ. ಭೋಪಾಲ್ ಅನಿಲ ದುರಂತದಲ್ಲಿ ಸಂತ್ರಸ್ತರಾದವರಿಗಾಗಿ ಬಿಡುಗಡೆಯಾದ ಹಣದಲ್ಲೂ ಲೂಟಿ ಹೊಡೆದು ಸ್ವಿಸ್ ಬ್ಯಾಂಕ್ನಲ್ಲಿ ಇಟ್ಟಿದ್ದಾರೆ.ಇದರ ಬಗ್ಗೆ ಪತ್ರಿಕೆಗಳೇ ವರದಿ ಮಾಡಿವೆ’ ಎಂದು ದೂರಿದರು.
‘ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟಿರುವ ರಾಜಕಾರಣಿಗಳ ಪಟ್ಟಿಯ ವರದಿಯು ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಗೃಹ ಸಚಿವರ ಬಳಿ ಇದೆ.ಇದನ್ನು ಬಹಿರಂಗಪಡಿಸಲು ಅವರು ಹಿಂದೇಟು ಹಾಕುತ್ತಿದ್ದಾರೆ.ಆ ವರದಿಯನ್ನು ಬಹಿರಂಗಗೊಳಿಸಿದರೆ ದೇಶದ ಅರ್ಧದಷ್ಟು ರಾಜಕಾರಣಿಗಳು ಜೈಲು ಸೇರುತ್ತಾರೆ.ಇಂತಹ ರಾಜಕಾರಣಿಗಳು ನಮ್ಮ ದೇಶವನ್ನು ಆಳುತ್ತಿರುವುದು ದುರದೃಷ್ಟಕರ ಸಂಗತಿ’ ಎಂದು ಕಿಡಿಕಾರಿದರು.
ಬೆಂಗಳೂರು ದಕ್ಷಿಣ ವಲಯದ ಜಿಲ್ಲಾ ಸಂಚಾಲಕ ತೇಜಸ್ವಿ ಸೂರ್ಯ ಮಾತನಾಡಿ, ‘2ಜಿ ಸ್ಪೆಕ್ಟ್ರಂ ಹಗರಣವು ಸರ್ಕಾರಿ ಪ್ರಾಯೋಜಿತ ಹಗರಣವಾಗಿದೆ.ಟೆಲಿಕಾಂ ಇಲಾಖೆಯಲ್ಲಿನ ಹಗರಣದಲ್ಲಿ ಸಾಮಾನ್ಯ ಗುಮಾಸ್ತನಿಂದ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕೂಡ ಭಾಗಿಯಾಗಿದ್ದಾರೆ’ ಎಂದು ದೂರಿದರು.
ಎಬಿವಿಪಿ ನಗರ ಕಾರ್ಯದರ್ಶಿ ರವಿಕುಮಾರ್, ಸಹ ಕಾರ್ಯದರ್ಶಿಗಳಾದ ಲಕ್ಷ್ಮಣ್, ಪ್ರಶಾಂತ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್, ಕೇಂದ್ರ ವಲಯ ಕಾರ್ಯದರ್ಶಿ ಪ್ರೇಮ್, ಉತ್ತರ ವಲಯ ಕಾರ್ಯದರ್ಶಿ ನಿತಿನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.