ADVERTISEMENT

40 ಆರ್‌ಎಫ್‌ಒಗಳ ವರ್ಗಾವಣೆ ಸಿದ್ಧತೆ

ಸಚಿವ ಜಾರಕಿಹೊಳಿ ಗಮನಕ್ಕೆ ತಾರದೆ ಆದೇಶ?

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 20:12 IST
Last Updated 4 ಜನವರಿ 2019, 20:12 IST
   

ಬೆಂಗಳೂರು: ಸುಮಾರು 40ಕ್ಕೂ ಹೆಚ್ಚು ವಲಯ ಅರಣ್ಯಾಧಿಕಾರಿಗಳ (ಆರ್‌ಎಫ್‌ಒ) ವರ್ಗಾವಣೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅನುಮೋದನೆ ನೀಡಿದ್ದಾರೆ. ನೂತನ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಗಮನಕ್ಕೆ ತಾರದೇ ವರ್ಗಾವಣೆಗೆ ಸಿದ್ಧತೆ ನಡೆಸಲಾಗಿದೆ ಎಂಬ ಮಾತು ಕೇಳಿ ಬಂದಿದೆ.

ರಾಜ್ಯ ಸರ್ಕಾರದ ವರ್ಗಾವಣೆ ಮಾರ್ಗಸೂಚಿ ಪ್ರಕಾರ ವರ್ಗಾವಣೆ ಪ್ರಮಾಣ ಶೇ 4ಕ್ಕಿಂತ ದಾಟುವಂತಿಲ್ಲ. ಆದರೆ, ಮುಖ್ಯಮಂತ್ರಿ ಅನುಮೋದನೆ ಪಡೆದು ಹೆಚ್ಚುವರಿ ವರ್ಗಾವಣೆ ಅವಕಾಶ ಇದೆ. ಈ ವೇಳೆ, ಸಂಬಂಧಿಸಿದ ಇಲಾಖಾ ಸಚಿವರ ಜತೆಗೆ ಚರ್ಚಿಸಿ ಪ್ರಕ್ರಿಯೆ ನಡೆಸುವುದು ನಡೆದುಕೊಂಡು ಬಂದ ಸಂಪ್ರದಾಯ.

ಆರ್‌.ಶಂಕರ್‌ ಅರಣ್ಯ ಸಚಿವರಾಗಿದ್ದಾಗ 14 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಹೆಚ್ಚುವರಿ ಪಟ್ಟಿ ಸಿದ್ಧವಾಗಿದ್ದು, ಹಾಸನ ಜಿಲ್ಲೆಯ ಒಂಬತ್ತು ವಲಯ ಅರಣ್ಯಾಧಿಕಾರಿಗಳ ಪೈಕಿ ಏಳು ಮಂದಿಯನ್ನು ವರ್ಗಾವಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯ ಜೆಡಿಎಸ್‌ ಮುಖಂಡರ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಮುಖ್ಯಮಂತ್ರಿ ಸಚಿವಾಲಯದಿಂದ ಅರಣ್ಯ ಇಲಾಖೆಗೆ ಶುಕ್ರವಾರ ಕಡತ ಬಂದಿದೆ. ಅದನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಕಡತವನ್ನು ಶನಿವಾರ ಕಳುಹಿಸಲಾಗುತ್ತದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.