ADVERTISEMENT

₹ 5 ಲಕ್ಷ ಠೇವಣಿ ಇರಿಸಲು ಏರ್‌ ಇಂಡಿಯಾಗೆ ಆದೇಶ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:58 IST
Last Updated 13 ಮಾರ್ಚ್ 2018, 19:58 IST

ಬೆಂಗಳೂರು: ಅಂಗವಿಕಲ ದಂತ ವೈದ್ಯೆಗೆ ಗಾಲಿ ಕುರ್ಚಿ ನೀಡದೆ ತೊಂದರೆ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ₹5 ಲಕ್ಷ ಮೊತ್ತವನ್ನು ರಿಜಿಸ್ಟ್ರಾರ್ ಜನರಲ್‌ ಕಚೇರಿಯಲ್ಲಿ ಠೇವಣಿಯಾಗಿ ಇರಿಸುವಂತೆ ಏರ್ ಇಂಡಿಯಾಗೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ನಗರದ ದಂತವೈದ್ಯೆ ಡಾ.ರಾಜಲಕ್ಷ್ಮೀ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜಲಕ್ಷ್ಮೀ ತಾಯಿ ಡಾ.ಶೋಭಾ ಸ್ವತಃ ವಾದ ಮಂಡಿಸಿ, ‘ನಾನು ಮತ್ತು ನನ್ನ ಅಂಗವಿಕಲ ಮಗಳು 2016ರ ಆಗಸ್ಟ್‌ನಲ್ಲಿ ಸ್ಕಾಟ್ಲೆಂಡ್‌ ಪ್ರವಾಸಕ್ಕೆಂದು ಲಂಡನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದೆವು. ಆದರೆ, ಅಲ್ಲಿ ನನ್ನ ಮಗಳಿಗೆ ಗಾಲಿ ಕುರ್ಚಿ ನೀಡದೆ ಏರ್‌ ಇಂಡಿಯಾ ವಿಮಾನ ಸಿಬ್ಬಂದಿ ತೀವ್ರ ತೊಂದರೆ ಉಂಟು ಮಾಡಿದರು’ ಎಂದು ಆರೋಪಿಸಿದರು.

ADVERTISEMENT

‘ಇದರಿಂದಾಗಿ ನಮ್ಮ ಸ್ಕಾಟ್ಲೆಂಡ್‌ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಕಷ್ಟಪಟ್ಟು ವಾಪಸು ಭಾರತಕ್ಕೆ ಹಿಂದಿರುಗಿದೆವು. ಈ ಮಧ್ಯೆ ಎರಡು ದಿನಗಳ ಕಾಲ ಹೀಥ್ರೂ ವಿಮಾನ ನಿಲ್ದಾಣದಲ್ಲೇ ಕಳೆಯುವಂತಾಯಿತು. ಈ ವೇಳೆ ವಿಪರೀತ ಚಳಿಯಿಂದಾಗಿ ನನ್ನ ಮಗಳ ಆರೋಗ್ಯದಲ್ಲಿ ಏರುಪೇರಾಯಿತು’ ಎಂದು ಹೇಳಿದರು.

‘ಏರ್‌ ಇಂಡಿಯಾ ವಿಮಾನ ಯಾನ ಸೇವೆಯ ಈ ವ್ಯತ್ಯಯದಿಂದ ನಾವು ಕಷ್ಟ–ನಷ್ಟ ಅನುಭವಿಸಿದ್ದೇವೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಮಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು’ ಎಂದು ಕೋರಿ ಈ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ವಿಚಾರಣೆಯನ್ನು ಏಪ್ರಿಲ್ 3ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.