ಬೆಂಗಳೂರು: ಬಿಎಂಟಿಸಿಯಲ್ಲಿ 150 ವಿದ್ಯುತ್ ಚಾಲಿತ ಬಸ್ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ವಿದ್ಯುತ್ ಚಾಲಿತ ಬಸ್ಸುಗಳನ್ನು ಸಾರ್ವಜನಿಕ ಸೇವೆಗೆ ಸೇರ್ಪಡೆ ಮಾಡುತ್ತಿರುವುದು ದೇಶದಲ್ಲೇ ಕರ್ನಾಟಕ ಪ್ರಥಮ. ದೆಹಲಿಯಲ್ಲಿ ಪ್ರಾಯೋಗಿಕವಾಗಿ ಸಂಚರಿಸುತ್ತಿವೆ ಎಂದು ಅವರು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಮುಂದಿನ ಹಂತದಲ್ಲಿ ಬೆಂಗಳೂರು– ಮೈಸೂರು, ಬೆಂಗಳೂರು– ತುಮಕೂರು ಮತ್ತು ಬೆಂಗಳೂರು– ಕೋಲಾರದ ನಡುವೆ ವಿದ್ಯುತ್ ಚಾಲಿತ ಬಸ್ಗಳ ಸೇವೆ ಆರಂಭಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.
‘ಈ ಯೋಜನೆಗೆ ಕೇಂದ್ರ ಸರ್ಕಾರ ಸಹಾಯಧನ ನೀಡಲಿದೆ. ಬಿಎಂಟಿಸಿಗೆ ಬಸ್ಗಳನ್ನು ಮಾರಾಟ ಮಾಡುವ ಕಂಪನಿಗಳೇ ಬಸ್ಗೆ ಚಾಲಕರನ್ನು ನೀಡಲಿವೆ. ನಿರ್ವಾಹಕರು ಮಾತ್ರ ನಮ್ಮವರು. ತಾಂತ್ರಿಕ ನಿರ್ವಹಣೆ ಕಂಪನಿಯದ್ದಾಗಿರುತ್ತದೆ. ಟೆಂಡರ್ ಅಂತಿಮಗೊಂಡ ಬಳಿಕ ವಿದ್ಯುತ್ ಚಾಲಿತ ಬಸ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಆಗ ಷರತ್ತುಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ರೇವಣ್ಣ ತಿಳಿಸಿದರು.
ನೆಲಮಂಗಲ ಟ್ರಕ್ ಟರ್ಮಿನಲ್: ನೆಲಮಂಗಲದಲ್ಲಿ ₹ 21 ಕೋಟಿ ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲಾಗಿದೆ. ಮುಖ್ಯ ರಸ್ತೆಯಿಂದ ಟರ್ಮಿನಲ್ಗೆ ಸಂಪರ್ಕ ರಸ್ತೆ ಇರಲಿಲ್ಲ. ರಸ್ತೆ ನಿರ್ಮಾಣ ಈಗ ಮುಗಿದಿದೆ. ಸದ್ಯವೇ ಟ್ರಕ್ ಟರ್ಮಿನಲ್ ಉದ್ಘಾಟಿಸಲಾಗುವುದು ಎಂದು ಅವರು ತಿಳಿಸಿದರು.
ಯಶವಂತಪುರ ಟ್ರಕ್ ಟರ್ಮಿನಲ್ ಅವ್ಯವಸ್ಥೆಯಿಂದ ಕೂಡಿತ್ತು. 80 ಟ್ರಕ್ ಲೋಡ್ ಕಸವನ್ನು ತೆಗೆದು ಸಾಗಿಸಿ, ಸ್ವಚ್ಛಗೊಳಿಸಲಾಗಿದೆ. ಟ್ರಕ್ ಚಾಲಕರಿಗಾಗಿ ಇಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಫೆಬ್ರುವರಿಯಿಂದ ವಾಹನ ವಿರಳ ಸಂಚಾರ ದಿನ: ಫೆಬ್ರುವರಿ 2 ನೇ ಭಾನುವಾರದಿಂದ ವಾಹನ ವಿರಳ ಸಂಚಾರ ದಿನ ಆರಂಭಿಸಲಾಗುವುದು. ಈ ಸಂಬಂಧ ಐಟಿ– ಬಿಟಿ ಕಂಪನಿಗಳ ಮುಖ್ಯಸ್ಥರ ಸಭೆ ಕರೆಯಲಾಗಿದೆ ಎಂದು ಅವರು ಹೇಳಿದರು.
ಈ ವಿಷಯವನ್ನು ವಿವಿಧ ಬಡಾವಣೆಗಳಲ್ಲಿ ಪ್ರಚಾರ ನಡೆಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು. ವಾಹನ ವಿರಳ ಸಂಚಾರ ದಿನಗಳಲ್ಲಿ ಬಿಎಂಟಿಸಿ ಬಸ್ ಪ್ರಯಾಣ ದರ ಮತ್ತು ಪಾಸ್ ದರ ಕಡಿಮೆ ಇರುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.