ಬೆಂಗಳೂರು: ಕಾರ್ಮೆಲ್ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಅಂಗವಾಗಿ ಶಾಲೆಯ ಸಂಸ್ಥಾಪಕ ಅಲೆಕ್ಸಾಂಡರ್ ಮಿನೆಜಸ್ ಅವರ ಪ್ರತಿಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಅರಮನೆ ಮೈದಾನದಲ್ಲಿ ಬುಧವಾರ ಅನಾವರಣಗೊಳಿಸಿದರು.
ಇದಕ್ಕೂ ಮುನ್ನ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಶಾಲೆಯ ಸುವರ್ಣ ಮಹೋತ್ಸವ ಸಂಚಿಕೆ ಬಿಡುಗಡೆ ಮಾಡಿದರು.
ವಜುಭಾಯಿ ವಾಲಾ, ‘ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಉತ್ತಮವಾದದ್ದು. ಈ ಧರ್ಮದ ಮನೋಭಾವವನ್ನು ಪೋಷಕರು ಮಕ್ಕಳಲ್ಲಿ ತುಂಬಬೇಕು’ ಎಂದರು.
ಐವತ್ತು ವರ್ಷಗಳ ಹಿಂದೆ ಐದು ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕನಿಂದ ಒಂದು ಚಿಕ್ಕ ಕೊಠಡಿಯಲ್ಲಿ ಪ್ರಾರಂಭವಾದ ಈ ಶಾಲೆ ಇಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಶಾಲೆಯಲ್ಲಿ ಓದಿದವರು ದೇಶದ ಮೂಲೆ ಮೂಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
***
ಜ್ಞಾನವೇ ಹಣ. ಪೋಷಕರು ಅದನ್ನು ಅರಿತು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅದೇ ಅವರ ಜೀವನ ರೂಪಿಸುತ್ತದೆ
-ವಜುಭಾಯಿ ವಾಲಾ, ರಾಜ್ಯಪಾಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.