ಬೆಂಗಳೂರು: ಇದೇ 28ಕ್ಕೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಫೆಬ್ರುವರಿ 4ಕ್ಕೆ ಮುಂದೂಡಿಕೆಯಾಗಲಿದೆ.
ಪೂರ್ವ ನಿಗದಿಯಂತೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಬೇಕಾಗಿತ್ತು. ಆದರೆ, ಅವರು ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮುಂದೂಡಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿಯ ಒಂದು ಮೂಲ ಹೇಳಿದೆ.
‘ಕಾರ್ಯಕ್ರಮ ನಡೆಯಬೇಕಿದ್ದ ಅರಮನೆ ಮೈದಾನವನ್ನು ಬೇರೆಯವರು ಕಾಯ್ದಿರಿಸಿದ್ದಾರೆ. ಅನುಮತಿ ನೀಡುವ ಅಧಿಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಇದೆ. ಸರ್ಕಾರದ ಮೇಲೆ ಒತ್ತಡ ಹಾಕಿ, ಬಿಜೆಪಿಗೆ ನೀಡುವಂತೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಅದೇ ಪಕ್ಷದ ಮತ್ತೊಂದು ಮೂಲ ತಿಳಿಸಿದೆ.
ಮೈಸೂರಿಗೆ ಅಮಿತ್ ಷಾ:
ಮೈಸೂರಿನಲ್ಲಿ ಇದೇ 25ರಂದು ನಡೆಯಲಿರುವ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗವಹಿಸುವ ಸಂಭವ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಷಾ ಸೂಚಿಸಿದ್ದರು. ‘ಸಮಾವೇಶಕ್ಕೆ ಶಕ್ತಿ ತುಂಬಲು ನೀವೇ ಬರಬೇಕು ಎಂದು ರಾಜ್ಯ ನಾಯಕರು ಅವರನ್ನು ಕೋರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.