ಬೆಂಗಳೂರು: ಆಧಾರ್ ಕಡ್ಡಾಯಗೊಳಿಸಿರುವುದನ್ನು ಖಂಡಿಸಿ ‘ಆಧಾರ್ ಸರಪಳಿಯನ್ನು ಮುರಿಯಿರಿ’ ಎಂಬ ಘೋಷಣೆಯೊಂದಿಗೆ ಆಹಾರ ಹಕ್ಕಿಗಾಗಿ ಜನಾಂದೋಲನ ಸಂಘಟನೆ ಶುಕ್ರವಾರ ಪ್ರತಿಭಟನೆ ನಡೆಸಿತು.
‘ಆಧಾರ್ ಮೂಲಕ ನಮ್ಮೆಲ್ಲರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ. ದೇಶದಲ್ಲಿರುವ ಜನರಿಗೆ ಒಂದೊಂದು ಸಂಖ್ಯೆಯನ್ನು ನೀಡುವ ಅಗತ್ಯವೇನಿದೆ. ಅಲ್ಲದೆ, ಆ ಎಲ್ಲಾ ಮಾಹಿತಿ ಯಾವುದೊ ದೇಶದವರ ಮುಷ್ಠಿಯಲ್ಲಿರುತ್ತದೆ. ಇದನ್ನು ತಡೆಯಲು ಈ ಅಭಿಯಾನ ಹಮ್ಮಿಕೊಂಡಿದ್ದೇವೆ’ ಎಂದು ಸಂಘಟನೆ ಸದಸ್ಯೆ ಮಲರ್ ತಿಳಿಸಿದರು.
‘ನಮ್ಮ ಆಯ್ಕೆ, ನಿರ್ಣಯ, ಮೊಬೈಲ್ ಕರೆ, ನಮ್ಮ ದುಡಿಮೆ ಹಣ, ಜೀವನದ ಪ್ರತಿ ಹೆಜ್ಜೆ ಗುರುತನ್ನು ಪತ್ತೆ ಹಚ್ಚುವ ಮತ್ತು ಪರೀಕ್ಷಿಸುವ ವ್ಯವಸ್ಥೆ ಇದಾಗಿದೆ. ಇದರಿಂದ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚು. ಎಲ್ಲದ್ದಕ್ಕೂ ಆಧಾರ್ ಕಡ್ಡಾಯಗೊಳಿಸಿ ನಮ್ಮ ಖಾಸಗಿತನದ ಹಕ್ಕಿಗೆ ಧಕ್ಕೆ ಮಾಡಲಾಗುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದರು.
‘ಬ್ರಿಟನ್, ಅಮೆರಿಕದಲ್ಲಿ ವಿಫಲವಾಗಿರುವ ಯೋಜನೆಯನ್ನು ನಮ್ಮ ದೇಶದಲ್ಲಿ ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಆಧಾರ್ ವಿರೋಧಿಸಿ ಸುಪ್ರೀಂಕೋರ್ಟ್ಗೆ ರಾಜ್ಯದಿಂದ 300 ಪ್ರಮಾಣ ಪತ್ರ ಹಾಗೂ 1,000ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ದೆಹಲಿ, ಮುಂಬೈ, ಹೈದರಾಬಾದ್ನಲ್ಲಿಯೂ ಪ್ರತಿಭಟನೆ ನಡೆಸಿದ್ದೇವೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.