ಬೆಂಗಳೂರು: ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಮುಂದಿನ 12ರಿಂದ 15 ವರ್ಷಗಳಲ್ಲಿ ಶೇ 9ರಷ್ಟು ವೃದ್ಧಿಯಾಗಲಿದೆ. ಆರ್ಥಿಕತೆಯಲ್ಲಿ ಜಗತ್ತಿನಲ್ಲೇ 3ನೇ ಅಥವಾ 4ನೇ ಸ್ಥಾನ ಪಡೆದುಕೊಳ್ಳಲಿದೆ ಎಂದು ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ರಾಧಾಕೃಷ್ಣನ್ ತಿಳಿಸಿದರು.
ಆರ್.ವಿ. ಶಿಕ್ಷಕರ ಕಾಲೇಜು ಹಾಗೂ ಸಮರ್ಥ ಭಾರತ ಟ್ರಸ್ಟ್ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಯುವ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಆರ್ಥಿಕತೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಈ ಅಭಿವೃದ್ಧಿ ದರವನ್ನು ಕಾಯ್ದುಕೊಂಡರೆ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆಯಲಿದೆ ಎಂದರು.
‘ನನ್ನ ತಾಯಿ, ಅಜ್ಜಿ ಹಾಗೂ ತಾತ ಶಿಕ್ಷಕರಾಗಿದ್ದರು. ನಾನು ಇಸ್ರೊ ಅಧ್ಯಕ್ಷನಾಗಿ ಕೆಲಸ ಮಾಡಿದ್ದರೂ, ಊರಿನ ಜನ ನನ್ನನ್ನು ಶಿಕ್ಷಕಿಯ ಮಗನೆಂದೇ ಗುರುತಿಸುತ್ತಾರೆ. ಗುರುವಿಗೆ ಅಂತಹ ಮಹತ್ವವಿದೆ’ ಎಂದು ತಿಳಿಸಿದರು.
ಸಮರ್ಥ ಭಾರತ ಟ್ರಸ್ಟ್ನ ರಾಜೇಶ್ ಪದ್ಮಾರ್, ‘ವಿವೇಕಾನಂದರ ಆದರ್ಶಗಳನ್ನು ಯುವಕರು ಪಾಲಿಸುವಂತೆ ಮಾಡುವ ಉದ್ದೇಶದಿಂದ ವಿವೇಕ ಬ್ಯಾಂಡ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನ ಇದೇ 26ಕ್ಕೆ ಕೊನೆಗೊಳ್ಳಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.