ಬೆಂಗಳೂರು: ಉದ್ಯಮಿಯೊಬ್ಬರ 15 ವರ್ಷದ ಮಗಳನ್ನು ಪುಸಲಾಯಿಸಿ ತನ್ನೊಟ್ಟಿಗೆ ಕರೆದೊಯ್ದಿದ್ದ ಆರೋಪದ ಮೇಲೆ ಹೈದರಾಬಾದ್ನ ಎಂಜಿನಿಯರಿಂಗ್ ವಿದ್ಯಾರ್ಥಿ ಸೂರ್ಯಪ್ರಕಾಶ್ ರೆಡ್ಡಿ (23) ಎಂಬಾತನನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಹುಡುಗಿ ತಂದೆ ಜ.6ರಂದು ದೂರು ಕೊಟ್ಟಿದ್ದರು. ‘ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಕೆಯನ್ನು ಯುಬಿ ಸಿಟಿ ಬಳಿ ಬಿಟ್ಟು ಹೋಗಿದ್ದೆ. ನಾನು ಕೆಲಸ ಮುಗಿಸಿಕೊಂಡು ಸಂಜೆ 4 ಗಂಟೆಗೆ ಮನೆಗೆ ಹೋದರೂ ಆಕೆ ಬಂದಿರಲಿಲ್ಲ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
‘ಮಗಳ ಕೋಣೆ ಪರಿಶೀಲಿಸಿದಾಗ ಒಂದು ಪತ್ರ ಸಿಕ್ಕಿತು. ‘ಆರು ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಪರಿಚಯವಾದ ಕಡಪದ ಸೂರ್ಯಪ್ರಕಾಶ್ ರೆಡ್ಡಿ ಹಾಗೂ ಆತನ ಕುಟುಂಬದವರ ಪ್ರಭಾವಕ್ಕೆ ಒಳಗಾಗಿದ್ದೇನೆ. ನಾನು ಅವನೊಟ್ಟಿಗೆ ಹೋಗುತ್ತಿದ್ದೇನೆ’ ಎಂದು ಬರೆದಿದ್ದಳು’ ಎಂದಿದ್ದರು.
‘ಅಪಹರಣ (ಐಪಿಸಿ 363)ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದೆವು. ರೆಡ್ಡಿಯ ಮೊಬೈಲ್ ಕರೆ ವಿವರ ಪರಿಶೀಲಿಸಿದಾಗ, ಸಂತ್ರಸ್ತೆ ಆತನಿಗೆ ಕರೆ ಮಾಡಿರುವ ಸಂಗತಿ ತಿಳಿಯಿತು. ಆತನ ಮೊಬೈಲ್ ಹೊಸೂರು ರಸ್ತೆ ಟವರ್ನಿಂದ ಸಂಪರ್ಕ ಪಡೆಯುತ್ತಿತ್ತು. ಕೂಡಲೇ ಮಫ್ತಿಯಲ್ಲಿ ತೆರಳಿ ಅವರಿಬ್ಬರನ್ನೂ ಪತ್ತೆ ಮಾಡಿದೆವು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.