ಬೆಂಗಳೂರು: ದೇಶದಲ್ಲಿ 3,686 ಪುರಾತತ್ವ ಸ್ಮಾರಕಗಳಿದ್ದು, ಅವುಗಳಲ್ಲಿ 506 ಸ್ಮಾರಕಗಳು ಕರ್ನಾಟಕದಲ್ಲೇ ಇವೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವ ಡಾ.ಮಹೇಶ್ ಶರ್ಮ ತಿಳಿಸಿದರು.
ಕೇಂದ್ರ ಸಂಸ್ಕೃತಿ ಸಚಿವಾಲಯವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ’ದಲ್ಲಿ ಅವರು ಮಾತನಾಡಿದರು.
ದೇಶದ ಪ್ರತಿ 100 ಕಿ.ಮೀ. ವ್ಯಾಪ್ತಿಯಲ್ಲಿ ಭಾಷೆ, ಸಂಸ್ಕೃತಿ ಹಾಗೂ ಸಂವೇದನೆ ಬದಲಾಗುತ್ತದೆ. ಆದರೂ ನಾವೆಲ್ಲರೂ ಭಾರತೀಯರು. ಕರ್ನಾಟಕದಲ್ಲಿ ಮೈಸೂರು, ಪಟ್ಟದಕಲ್ಲು, ಹಂಪಿ, ಐಹೊಳೆ, ಬೀದರ್, ಚಿತ್ರದುರ್ಗದ ಕೋಟೆ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿವೆ. ಇವು ಇಲ್ಲಿನ ಕಲೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಯುವ ಸಮುದಾಯವು ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಅಧ್ಯಯನ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು. ಕೇಂದ್ರ ಸಚಿವರು ಒಂದೂವರೆ ನಿಮಿಷಗಳವರೆಗೆ ಕನ್ನಡದಲ್ಲೇ ಮಾತನಾಡಿದರು.
ಕೇಂದ್ರ ಸಚಿವ ಅನಂತಕುಮಾರ್, ‘ಭಾರತೀಯ ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯಕ್ಕೆ ಕರ್ನಾಟಕವು ಮುಕುಟಮಣಿ ಇದ್ದಂತೆ. ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಸಿನಿಮಾ ಕೇವಲ ಮನರಂಜನೆಯಲ್ಲ. ಇವು ಸಂಸ್ಕೃತಿಯ ಭಾಗ’ ಎಂದು ತಿಳಿಸಿದರು.
ಕರ್ನಾಟಕ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಡ ಹಾಗೂ ರಾಜಸ್ಥಾನದ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.