ಬೆಂಗಳೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಪಡಿಸಬೇಕು. ಈ ವರದಿಯ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಕೊರಮ– ಕೊರಚ (ಕುಳುವ) ಹಿತರಕ್ಷಣಾ ಒಕ್ಕೂಟ ಒತ್ತಾಯಿಸಿದೆ.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಕುಳುವ ಮಹಾಸಂಘದ ಅಧ್ಯಕ್ಷ ತಿರುಮಲಾಪುರ ಕೆ.ಗೋಪಾಲ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಕೇವಲ ಎರಡು ಜಾತಿಗಳ ನಾಯಕರ ಜೊತೆ ಚರ್ಚಿಸಿ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ’ ಎಂದು ಆರೋಪಿಸಿದರು.
‘ಎಡಗೈ– ಬಲಗೈ ಸಮುದಾಯಗಳನ್ನು ಹೊರತುಪಡಿಸಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಇತರ ಜಾತಿಗಳ ಮುಖಂಡರ ಸಭೆಯನ್ನೂ ನಡೆಸಬೇಕು. ಈ ಜಾತಿಗಳ ಮುಖಂಡರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಇಂದು ಸಭೆ:
‘ಈ ವರದಿ ದಲಿತರಲ್ಲೇ ಸಂಘರ್ಷ ಹುಟ್ಟು ಹಾಕಿದೆ. 99 ಜಾತಿಗಳು ಈ ವರದಿಗೆ ವಿರುದ್ಧವಾಗಿವೆ. ಈ ವರದಿ ಜಾರಿಯನ್ನು ವಿರೋಧಿಸುವ ಸಲುವಾಗಿ ಕೊರಮ, ಕೊರಚ, ಭೊವಿ, ಲಂಬಾಣಿ ಸೇರಿದಂತೆ ವಿವಿಧ ಜಾತಿ ಸಂಘಟನೆಗಳ ಮುಖಂಡರು ನಗರದ ಜಸ್ಮಾ ದೇವಿ ಭವನದಲ್ಲಿ ಇದೇ 18ರಂದು ಸಭೆ ಸೇರಿ ಮುಂದಿನ ಹೋರಾಟಗಳ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ’ ಎಂದು ಅಖಿಲ ಕರ್ನಾಟಕ ಕೊರಮರ ಸಂಘದ ಅಧ್ಯಕ್ಷ ಜಿ. ಮಾದೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.