ADVERTISEMENT

ಶತಮಾನೋತ್ಸವ ಸ್ಮಾರಕ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:46 IST
Last Updated 22 ಜನವರಿ 2018, 19:46 IST
ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಉಮಾಶ್ರೀ ಹಾಗೂ ಮನು ಬಳಿಗಾರ್‌ ಇದ್ದಾರೆ   –ಪ್ರಜಾವಾಣಿ ಚಿತ್ರ
ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಉಮಾಶ್ರೀ ಹಾಗೂ ಮನು ಬಳಿಗಾರ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 100 ವರ್ಷ ಪೂರೈಸಿದ ಅಂಗವಾಗಿ ನಿರ್ಮಾಣವಾಗಿರುವ ಶತಮಾನೋತ್ಸವ ಸ್ಮಾರಕ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟಿಸಿದರು.

₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮೂರು ಅಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿ ಎರಡು ಕಚೇರಿಗಳಿವೆ. 2ನೇ ಅಂತಸ್ತಿನಲ್ಲಿ ಅತಿಥಿಗಳು ತಂಗಲು 6 ಕೊಠಡಿಗಳು ಹಾಗೂ 3ನೇ ಅಂತಸ್ತಿನಲ್ಲಿ 180 ಆಸನ ವ್ಯವಸ್ಥೆ ಇರುವ ಅಕ್ಕಮಹಾದೇವಿ ಹೆಸರಿನ ಸಭಾಭವನವಿದೆ.

‘ಸಾಹಿತ್ಯ ಪರಿಷತ್ತು ಇಡೀ ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆ. ನಮ್ಮ ಭಾಷೆಯನ್ನು ಬೆಳೆಸುವ ಈ ಸಂಸ್ಥೆಗೆ  ಸರ್ಕಾರ ಸಂಪೂರ್ಣ ಬೆಂಬಲ ಕೊಡುತ್ತದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ADVERTISEMENT

ಪುಂಡಲೀಕ ಹಾಲಂಬಿ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸ್ಮಾರಕ ಭವನ ನಿರ್ಮಿಸುವ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದರು. ಭವನದ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದೆವು. ಇದೇ ಸರ್ಕಾರದ ಅವಧಿಯಲ್ಲಿ ಭವನ ನಿರ್ಮಾಣ ಮಾಡಿದ ಕೀರ್ತಿ ಮನು ಬಳಿಗಾರ್‌ ಅವರಿಗೆ ಸಲ್ಲುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದರು.

ಪರಿಷತ್ತಿನಲ್ಲಿ 59 ಮಂದಿ ಉದ್ಯೋಗ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಷತ್ತಿಗೂ ಸಿಬ್ಬಂದಿ ಮತ್ತು ನೇಮಕಾತಿ ನಿಯಮ ರೂಪಿಸಿದಲ್ಲಿ ಸಿಬ್ಬಂದಿಗೆ ಸೇವಾ ಭದ್ರತೆ ಜೊತೆಗೆ ವೇತನವೂ ಹೆಚ್ಚಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಬಳಿಗಾರ್‌ ಬೇಡಿಕೆ ಇಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಉಮಾಶ್ರೀ, ‘ಈ ಬಗ್ಗೆ ಮುಖ್ಯಮಂತ್ರಿ ಅವರ ಬಳಿ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.