ADVERTISEMENT

‘ಗುಲಾಮಗಿರಿ ಧಿಕ್ಕರಿಸಿದ ನೇತಾಜಿ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:48 IST
Last Updated 23 ಜನವರಿ 2018, 19:48 IST
ಎಚ್.ಎಸ್. ದೊರೆಸ್ವಾಮಿ ಅವರು ಸಾಕ್ಷ್ಯಚಿತ್ರದ ಸಿ.ಡಿ ಬಿಡುಗಡೆ ಮಾಡಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್ ಮತ್ತು ಚೂಡಿ ಶಿವರಾಂ ಇದ್ದಾರೆ - ಪ್ರಜಾವಾಣಿ ಚಿತ್ರ
ಎಚ್.ಎಸ್. ದೊರೆಸ್ವಾಮಿ ಅವರು ಸಾಕ್ಷ್ಯಚಿತ್ರದ ಸಿ.ಡಿ ಬಿಡುಗಡೆ ಮಾಡಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್ ಮತ್ತು ಚೂಡಿ ಶಿವರಾಂ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 121ನೇ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತೆ ಚೂಡಿ ಶಿವರಾಂ ನಿರ್ಮಿಸಿರುವ ‘ಅಟ್‌ ದ ಆಲ್ಟರ್ ಆಫ್‌ ಇಂಡಿಯಾಸ್‌ ಫ್ರೀಡಂ– ಐಎನ್‌ಎ ವೆಟರನ್ಸ್ ಆಫ್ ಮಲೇಷ್ಯಾ’ ಸಾಕ್ಷ್ಯಚಿತ್ರವನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಬಿಡುಗಡೆ ಮಾಡಿದರು. ಇದೇ ಸಂದರ್ಭ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಮಲೇಷ್ಯಾದಲ್ಲಿ ಸುಭಾಷ್ ನೇತೃತ್ವದ ಇಂಡಿಯನ್‌ ನ್ಯಾಷನಲ್‌ ಆರ್ಮಿ (ಐಎನ್‌ಎ) ಸೈನಿಕರ ತರಬೇತಿ, ಐಎನ್‌ಎ ಭಾಗವಾಗಿದ್ದ ‘ದಿ ರಾಣಿ ಆಫ್‌ ಝಾನ್ಸಿ ರೆಜಿಮೆಂಟ್‌’ನ ಹೆಣ್ಣುಮಕ್ಕಳ ತಂಡ, ಕಾಲ್ನಡಿಗೆಯಲ್ಲಿ ಯುದ್ಧಕ್ಕೆ ಹೊರಟ ಯೋಧರು, ನೇತಾಜಿ ಅವರ ದೇಶಪ್ರೇಮ ಬಿಂಬಿಸುವ ದೃಶ್ಯಗಳು ನೆರೆದವರ ಮನಸೂರೆಗೊಂಡವು.

ಐಎನ್‌ಎ ಭಾಗವಾಗಿದ್ದ ಮಲೇಷ್ಯಾ ನಿವಾಸಿಗಳು, ಸಾಕ್ಷ್ಯಚಿತ್ರದಲ್ಲಿ ಸುಭಾಷರ ಕುರಿತು ಭಾವುಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮಹಿಳಾ ರೆಜಿಮೆಂಟ್‌ನ ತರಬೇತಿ ದೃಶ್ಯಗಳು ಬಂದಾಗಲಂತೂ ಎಲ್ಲರೂ ಮಂತ್ರಮುಗ್ಧರಾದರು.

ADVERTISEMENT

ಎಚ್.ಎಸ್. ದೊರೆಸ್ವಾಮಿ, ‘ಸುಭಾಷರು ಬ್ರಿಟಿಷರು ಕೊಡುವ ಗುಲಾಮಗಿರಿಯ ಉದ್ಯೋಗವನ್ನು ಒಪ್ಪಿಕೊಳ್ಳಲಿಲ್ಲ. ವಿದೇಶಗಳಿಗೆ ಹೋಗಿ ಸೇನೆ ಕಟ್ಟಿ ಹೋರಾಡಿದರು. ಅವರ ಸಾವಿನ ಕುರಿತಾಗಿ ಅನೇಕ ಕಟ್ಟುಕತೆಗಳಿವೆ. ನೇತಾಜಿ ಬದುಕಿದ್ದರೆ ಅವರು ಭಾರತಕ್ಕೆ ಬಂದೇ ಬರುತ್ತಿದ್ದರು. ದೇಶದ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದರು’ ಎಂದು ಹೇಳಿದರು.

ಚೂಡಿ ಶಿವರಾಂ ಮಾತನಾಡಿ, ‘ಐಎನ್‌ಎ ಭಾಗವಾಗಿದ್ದ ಅನೇಕರು ಇಂದಿಗೂ ಮಲೇಷ್ಯಾದಲ್ಲಿದ್ದಾರೆ. ಅವರ ವಯಸ್ಸು 90ರ ಅಸುಪಾಸಿನಲ್ಲಿದೆ. ಈ ಸಾಕ್ಷ್ಯಚಿತ್ರದಲ್ಲಿ ನೇತಾಜಿ ಜೊತೆಗಿನ ಒಡನಾಟ ಮತ್ತು ಹೋರಾಟದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ನೇತಾಜಿ ಅವರ ದೇಶಪ್ರೇಮ, ದೇಶದ ಕುರಿತ ದೃಷ್ಟಿಕೋನ ಹಾಗೂ ತ್ಯಾಗ ಮನೋಭಾವವನ್ನು ಎಲ್ಲರಿಗೂ ದಾಟಿಸಬೇಕು ಎಂಬ ಉದ್ದೇಶದಿಂದ ಸಾಕ್ಷ್ಯಚಿತ್ರ ನಿರ್ಮಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.