ಬೆಂಗಳೂರು: ನಿಗಿ ನಿಗಿ ಬಿಸಿಲಿನಿಂದಾಗಿ ಬಿಸಿಯಾಗಿದ್ದ ನಂದಿ ಬೆಟ್ಟ ರಸ್ತೆಯ ತಿಮ್ಮರಾಯಸ್ವಾಮಿ ಬೆಟ್ಟ ಭಾನುವಾರ ದೇಶ ವಿದೇಶಗಳ ಓಟಗಾರರು ಮತ್ತು ಸೈಕ್ಲಿಸ್ಟ್ಗಳ ಉತ್ಸಾಹದ ಕಾವು ಏರುವಂತೆ ಮಾಡಿತ್ತು.
ಇಲ್ಲಿ ನಡೆದ ಗುಡ್ಡಗಾಡು ಓಟ ಮತ್ತು ಸೈಕ್ಲಿಸ್ಟ್ಗಳ ಸಾಹಸ ಪ್ರದರ್ಶನ ಪ್ರೇಕ್ಷಕರ ಮೈನವಿರೇಳುವಂತೆ ಮಾಡಿತು. ವಾರಾಂತ್ಯದ ವಿಹಾರಕ್ಕಾಗಿ ಇಲ್ಲಿಗೆ ಬಂದವರಿಗೂ ಈ ಅಪೂರ್ವ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು.
3ನೇ ವರ್ಷದ ‘2ಗೋ ಬೆಂಗಳೂರು ಮೌಂಟೆನ್ ಫೆಸ್ಟಿವಲ್’ನ ಅತ್ಯಂತ ಸವಾಲಿನಿಂದ ಕೂಡಿದ್ದ 800 ಮೀಟರ್ ಉದ್ದದ ‘ಡೌನ್ ಹಿಲ್ ರೇಸ್’ನಲ್ಲಿ ನೇಪಾಳದ ಚಾಂಪಿಯನ್ ಸೈಕ್ಲಿಸ್ಟ್ ರಾಜೇಶ್ ಮಗರ್ ಪ್ರಥಮ ಸ್ಥಾನ ಪಡೆದರು. ಬೆಟ್ಟದ ಕಡಿದಾದ ಇಳಿಜಾರಿನಲ್ಲಿ 21 ಅಡಿ ದೂರ ಸೈಕಲ್ ಹಾರಿಸಿದ ಅವರ ಸಾಹಸಕ್ಕೆ ಪ್ರೇಕ್ಷಕರು ನಿಬ್ಬೆರಗಾದರು. ಇವರಿಗೆ ತೀವ್ರ ಪೈಪೋಟಿ ನೀಡಿದ ಪುಣೆಯ ಪಿಯೂಷ್ ಚವಾಣ್ ಕೂದಲೆಳೆ ಅಂತರದ ಹಿನ್ನಡೆಯಿಂದಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬೆಂಗಳೂರಿನ 16ರ ಹರೆಯದ ರಿಷಬ್ ಗೌಡಗೆ ತೃತೀಯ ಸ್ಥಾನ ಲಭಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.