ಬೆಂಗಳೂರು: ರಾಣಿ (27) ಎಂಬುವರ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಪತಿ ಸೆಂಥಿಲ್ಗೆ (35) ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.
2013ರ ಜುಲೈ 31ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ ಆದೇಶ ಹೊರಡಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಚನ್ನಪ್ಪ ಹರಸೂರು ವಾದಿಸಿದ್ದರು.
ಪ್ರಕರಣದ ವಿವರ: ತಮಿಳುನಾಡಿನ ಸೆಂಥಿಲ್, ಕೆಲಸ ಹುಡುಕಿಕೊಂಡು ಪತ್ನಿ ರಾಣಿ ಹಾಗೂ ಮಗನ ಜತೆ ಬೆಂಗಳೂರಿಗೆ ಬಂದಿದ್ದ. ಸಂಜಯ
ನಗರದ ಸಂಜೀವಪ್ಪ ಕಾಲೊನಿಯಲ್ಲಿ ವಾಸವಿದ್ದ. ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದ ರಾಣಿ, ಮದುವೆ ನಂತರ ಶಿಕ್ಷಣ ಮೊಟಕುಗೊಳಿಸಿದ್ದರು. ಪತ್ನಿಯನ್ನು ಶಿಕ್ಷಕಿಯನ್ನಾಗಿ ಮಾಡುವ ಕನಸು ಕಂಡಿದ್ದ ಸೆಂಥಿಲ್, ತಿರಪತ್ತೂರಿನ ಟಿ.ಸಿ.ಎಚ್ ಕಾಲೇಜಿಗೆ ಸೇರಿಸಿದ್ದ. ವ್ಯಾಸಂಗದ ವೇಳೆಯಲ್ಲಿ ರಾಣಿ ಅವರಿಗೆ ಸಹಪಾಠಿಯೊಬ್ಬರ ಪರಿಚಯವಾಗಿತ್ತು.
ಅವರಿಬ್ಬರ ನಡುವೆ ಸಲುಗೆ ಇರುವುದಾಗಿ ಸಂಶಯಪಟ್ಟಿದ್ದ ಸೆಂಥಿಲ್, ಪತ್ನಿಯ ಜತೆಗೆ ಜಗಳ ಮಾಡಲು ಆರಂಭಿಸಿದ್ದ. ಕಾಲೇಜಿಗೆ ರಜೆ ಇದ್ದಾಗ, ಪತ್ನಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಮನೆಯಲ್ಲಿದ್ದಾಗಲೂ ರಾಣಿಯು ಮೊಬೈಲ್ನಲ್ಲಿ ಸಹಪಾಠಿ ಜತೆಗೆ ಮಾತನಾಡುತ್ತಿದ್ದರು. ಆ ವಿಷಯವಾಗಿ ದಂಪತಿ ನಡುವೆ ಜಗಳ ಶುರುವಾಗಿತ್ತು.
ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ ಆತ, ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದ. ರಕ್ತಸ್ರಾವದಿಂದ ರಾಣಿ ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯನಗರ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.