ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಏಳು ವಾಣಿಜ್ಯ ಸಂಕೀರ್ಣಗಳನ್ನು ಕಬಳಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹುನ್ನಾರ ನಡೆಸಿದ್ದಾರೆ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದರು.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಚ್ಎಸ್ಆರ್ ಬಡಾವಣೆ, ಆಸ್ಟಿನ್ ಟೌನ್, ವಿಜಯನಗರ, ಕೋರಮಂಗಲ, ಆರ್.ಟಿ.ನಗರ, ಸದಾಶಿವನಗರ ಮತ್ತು ಇಂದಿರಾನಗರದ ಬಿಡಿಎ ವಾಣಿಜ್ಯ ಸಂಕೀರ್ಣಗಳು ಸುಮಾರು ₹5,000 ಕೋಟಿ ಬೆಲೆಬಾಳುತ್ತವೆ. ಇವುಗಳನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿ ಮತ್ತು ನಿರ್ಮಾಣ ಮಾಡಲು 2017ರ ಅಕ್ಟೋಬರ್ 19ರಂದು ಟೆಂಡರ್ ಆಹ್ವಾನಿಸಲಾಗಿದೆ. ಈ ಸಂಕೀರ್ಣಗಳನ್ನು ಜಾರ್ಜ್ ಪಾಲುದಾರಿಕೆಯ ಎಂಬೆಸಿ ಗ್ರೂಪ್ಗೆ 60 ವರ್ಷಗಳ ಅವಧಿಗೆ ಹಸ್ತಾಂತರಿಸಲು ಷಡ್ಯಂತ್ರ ನಡೆಸಲಾಗಿದೆ’ ಎಂದು ದೂರಿದರು.
ಹೂಳೆತ್ತುವ ಯಂತ್ರ ಖರೀದಿಯಲ್ಲಿ ಅವ್ಯವಹಾರ: ‘ರಾಜಕಾಲುವೆಯ ಹೂಳೆತ್ತಲು ಮೂರು ರೋಬೊಟಿಕ್ ಎಕ್ಸವೇಟರ್ಗಳನ್ನು ಪೂರೈಸಿ, ನಿರ್ವಹಣೆ ಮಾಡಲು ಆರ್ಯನ್ ಪಂಪ್ಸ್ ಮತ್ತು ಎನ್ವಿರೊ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ಗೆ ₹22.65 ಕೋಟಿ ಮೊತ್ತಕ್ಕೆ ಟೆಂಡರ್ ನೀಡಲಾಗಿದೆ. ಅಲ್ಲಿಗೆ ಪ್ರತಿ ರೋಬೊಟಿಕ್ ಎಕ್ಸವೇಟರ್ನ ವೆಚ್ಚ ಮತ್ತು ನಿರ್ವಹಣೆ ವೆಚ್ಚ ₹7.55 ಕೋಟಿ ಆಗಲಿದೆ. ಆದರೆ, ಸ್ವಿಟ್ಜರ್ಲೆಂಡ್ನ ಕೆಎಎಂ–ಎವಿಐಡಿಎ ಸಂಸ್ಥೆ ನಿರ್ಮಿಸಿರುವ ಈ ಯಂತ್ರದ ನಿಜವಾದ ಬೆಲೆ ₹1.37 ಕೋಟಿ. ಪ್ರತಿಯೊಂದು ಯಂತ್ರದ ಖರೀದಿಗೆ ₹6 ಕೋಟಿಯನ್ನು ಹೆಚ್ಚಿಗೆ ಪಾವತಿಸಲಾಗಿದೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.