ADVERTISEMENT

ಬಾಂಧವ್ಯ ಗಟ್ಟಿಗೊಳಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:17 IST
Last Updated 9 ಫೆಬ್ರುವರಿ 2018, 20:17 IST

ಬೆಂಗಳೂರು: ವನಿತಾ ಸಹಾಯವಾಣಿ ಕೇಂದ್ರದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ವರದಕ್ಷಿಣಿ ಕಿರುಕುಳ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ವಿವಾಹಪೂರ್ವ ಹಾಗೂ ವಿವಾಹ ನಂತರದ ಅನೈತಿಕ ಸಂಬಂಧ ಪ್ರಕರಣಗಳು ಹೆಚ್ಚುತ್ತಿವೆ. 2016–17ರಲ್ಲಿ ಅಕ್ರಮ ಸಂಬಂಧದ ಕುರಿತು 236 ಪ್ರಕರಣಗಳು ದಾಖಲಾಗಿವೆ.

ಅಕ್ರಮ ಸಂಬಂಧದ ಬಗ್ಗೆ ದಾಖಲಾದ ಬಹುತೇಕ ಪ್ರಕರಣಗಳಲ್ಲಿ, ದಂಪತಿ ವಿಚ್ಛೇದನವಾಗುವ ತೀರ್ಮಾನಕ್ಕೆ ಬಂದಿದ್ದರು. ಅವರ ದಾಂಪತ್ಯದಲ್ಲಿ ಮೂಡಿದ್ದ ಒಡಕನ್ನು ತಿಳಿಗೊಳಿಸಿ ಗಂಡ–ಹೆಂಡತಿ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲೂ ಸಹಾಯವಾಣಿ ಕೇಂದ್ರವು ಪ್ರಯತ್ನ ಮುಂದುವರಿಸಿದೆ.

‘ಅಕ್ರಮ ಸಂಬಂಧಗಳ ಬಗ್ಗೆ ಗೊತ್ತಾಗಿ ಪತಿ ಅಥವಾ ಪತ್ನಿ ಸಹಾಯವಾಣಿ ಮೆಟ್ಟಿಲೇರುತ್ತಿದ್ದಾರೆ. ಇಂತಹ ಅನೇಕ ದಂಪತಿಗೆ ಆಪ್ತ ಸಮಾಲೋಚನೆ ನಡೆಸಿದ್ದೇವೆ. ಅವರು ಮತ್ತೆ ಒಟ್ಟಾಗಿ ದಾಂಪತ್ಯ ನಡೆಸುವಂತೆ ಮಾಡಿದ್ದೇವೆ. ಕೆಲ ಪ್ರಕರಣಗಳಲ್ಲಿ ಅದು ಸಾಧ್ಯವಾಗಿಲ್ಲ’ ಎಂದು ಸಹಾಯವಾಣಿಯ ಸಿಬ್ಬಂದಿ ತಿಳಿಸಿದರು.

ADVERTISEMENT

‘ಫೇಸ್‌ಬುಕ್‌ನಲ್ಲಿ ಪರಿಚಿತನಾದ ವ್ಯಕ್ತಿಯೊಂದಿಗೆ ಶಿಕ್ಷಕಿಯೊಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಈ ಬಗ್ಗೆ ಆಕೆಯ ಪತಿ ದೂರು ಕೊಟ್ಟಿದ್ದರು. ಶಿಕ್ಷಕಿ ಹಾಗೂ ಆಕೆಯ ಪ್ರಿಯಕರನ್ನು ಕರೆಸಿ ವಿಚಾರಣೆ ನಡೆಸಿದಾಗ ಅವರಿಬ್ಬರು ತಪ್ಪೊಪ್ಪಿಕೊಂಡರು. ಅವರಿಗೆ ಬುದ್ಧಿವಾದ ಹೇಳಿ ಕಳುಹಿಸಿದೆವು’ ಎಂದರು.

‘ಪತಿಯು ಅಡುಗೆ ಕೆಲಸದಾಕೆ ಜತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ವಿಜ್ಞಾನಿಯೊಬ್ಬರು ದೂರು ಕೊಟ್ಟಿದ್ದರು. ಅವರನ್ನು ಕರೆಸಿ ಬುದ್ಧಿವಾದ ಹೇಳಿದ್ದೇವೆ. ಆ ದಂಪತಿ ಒಂದಾಗುವಂತೆ ಮಾಡಿದ್ದೆವು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.