ADVERTISEMENT

ಸುವರ್ಣರಥ: ಆದಾಯದಲ್ಲಿ ಕೆಎಸ್‌ಟಿಡಿಸಿಗೂ ಪಾಲು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:19 IST
Last Updated 9 ಫೆಬ್ರುವರಿ 2018, 20:19 IST
ಸುವರ್ಣರಥ: ಆದಾಯದಲ್ಲಿ ಕೆಎಸ್‌ಟಿಡಿಸಿಗೂ ಪಾಲು
ಸುವರ್ಣರಥ: ಆದಾಯದಲ್ಲಿ ಕೆಎಸ್‌ಟಿಡಿಸಿಗೂ ಪಾಲು   

ಬೆಂಗಳೂರು: ಸುವರ್ಣರಥವನ್ನು (ಗೋಲ್ಡನ್‌ ಚಾರಿಯಟ್‌) ನಷ್ಟದಲ್ಲಿಯೇ ನಿರ್ವಹಿಸುತ್ತಿದ್ದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಟಿಡಿಸಿ) ರೈಲ್ವೆ ಮಂಡಳಿ ಹೊರಡಿಸಿರುವ ಆದಾಯ ಹಂಚಿಕೆಯ ಹೊಸ ಆದೇಶ ಸಂತಸ ಮೂಡಿಸಿದೆ.

2002ರಲ್ಲಿ ರೈಲ್ವೆ ಇಲಾಖೆಯೊಂದಿಗೆ ಮಾಡಿಕೊಂಡ ಒಪ್ಪಂದ ಪ್ರಕಾರ ರೈಲ್ವೆ ಮಂಡಳಿಯು ಕೆಎಸ್‌ಟಿಡಿಸಿಗೆ ಗರಿಷ್ಠ ಪ್ರಮಾಣದ ಸಂಚಾರ ದರವನ್ನು
ನಿಗದಿಪಡಿಸಿತ್ತು. ಹಾಗಾಗಿ ನಿಗಮವು ಹೆಚ್ಚು ಪ್ರಯಾಣದರ ನಿಗದಿಪಡಿಸಬೇಕಾಗಿತ್ತು. ಹಾಗಾಗಿ ಸುವರ್ಣರಥವನ್ನು ಲಾಭದಾಯಕವಾಗಿ ನಿರ್ವಹಿಸುವುದು ಕಷ್ಟವಾಗಿತ್ತು.

ರೈಲ್ವೆ ಮಂಡಳಿ ಹಾಗೂ ಕೆಎಸ್‌ಟಿಡಿಸಿ ಆದಾಯ ಹಂಚಿಕೆಗೆ ಹೊಸ ಒಪ್ಪಂದ ಮಾಡಿಕೊಂಡಿವೆ. ಇದರ ಪ್ರಕಾರ, ಸುವರ್ಣ ರಥದಿಂದ ಬರುವ ಆದಾಯದಲ್ಲಿ ಶೇ 56ರಷ್ಟು ಆದಾಯ ರೈಲ್ವೆ ಮಂಡಳಿಗೆ ಹಾಗೂ ಶೇ 44ರಷ್ಟು ನಿಗಮಕ್ಕೆ ಹಂಚಿಕೆ ಆಗಲಿದೆ.

ADVERTISEMENT

ಆದಾಯ ಹಂಚಿಕೆಯ ಹೊಸ ಸೂತ್ರ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ದರದಲ್ಲಿ ಪ್ರವಾಸ ಆಯೋಜಿಸಲು ಇದು ಸಹಾಯಕವಾಗಿದೆ. ಹಾಗಾಗಿ ಲಾಭದ ರೈನಿರೀಕ್ಷೆ ಮಾಡಬಹುದು ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

‘ಸುವರ್ಣ ರಥವು ವರ್ಷಕ್ಕೆ 10 ಬಾರಿ ಪ್ರವಾಸ ಕೈಗೊಳ್ಳುತ್ತಿತ್ತು. ಇನ್ನು ಮುಂದೆ 20 ಬಾರಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

2008ರಲ್ಲಿ ಪ್ರಯಾಣ ಆರಂಭಿಸಿರುವ ಸುವರ್ಣರಥ ಇದುವರೆಗೂ ನಷ್ಟದಲ್ಲಿಯೇ ಇದೆ. ಇದರಿಂದ ಬರುತ್ತಿದ್ದ ವರಮಾನವು ರೈಲ್ವೆ ಇಲಾಖೆಗೆ ಸಂಚಾದ ದರವನ್ನು ಪಾವತಿಸುವುದಕ್ಕೆ ಸರಿಯಾಗುತ್ತಿತ್ತು. ಪ್ರವಾಸಿಗರ  ಆತಿಥ್ಯ ನಿರ್ವಹಣೆಗೆ ನಿಗಮವೇ ಹಣ ಭರಿಸಬೇಕಾದ ಸ್ಥಿತಿ ಇತ್ತು ಎಂದು ಕೆಎಸ್‌ಟಿಡಿಸಿ ಅಧಿಕಾರಿಗಳು ತಿಳಿಸಿದರು.

ಸುವರ್ಣರಥ ಸೇವೆ ಆರಂಭವಾದಾಗ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ಪ್ರವಾಸಿಗರೂ  ಸಂಭ್ರಮಿಸಿದ್ದರು. ‘ಪ್ರೈಡ್‌ ಆಫ್ ಸೌತ್‌’ ಹೆಸರಿನ ಕರ್ನಾಟಕ, ಗೋವಾ ಪ್ರವಾಸ ಹಾಗೂ ತಮಿಳುನಾಡು, ಕೇರಳ, ಪುದುಚೆರಿಗಳಿಗೆ ‘ಸದರ್ನ್‌ ಸ್ಪ್ಲೆಂಡರ್‌’ ಹೆಸರಿನಲ್ಲಿ ಏಳು ದಿನಗಳ ಪ್ರವಾಸ ಪ್ಯಾಕೇಜ್‌ ರೂಪಿಸಲಾಗಿತ್ತು.

ಪ್ರಯಾಣ ದರ ದುಬಾರಿಯೆಂಬ ಕಾರಣಕ್ಕೆ ಇದಕ್ಕೆ ಹೆಚ್ಚಿನ ಸ್ಪಂದನೆ ಸಿಕ್ಕಿರಲಿಲ್ಲ. ಪ್ರಯಾಣ ದರದಲ್ಲಿಶೇ 40ರಷ್ಟು ರಿಯಾಯಿತಿ ನೀಡಿದರೂ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಾಣಲಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.


ಶೇ 35 ರಷ್ಟು ಆಸನಗಳಷ್ಟೇ ಭರ್ತಿ

‘100 ಮಂದಿ ಪ್ರಯಾಣಿಸ ಬಹುದಾದ ಸುವರ್ಣರಥದಲ್ಲಿ ಶೇ 35ರಷ್ಟು ಆಸನಗಳಷ್ಟೇ ಭರ್ತಿಯಾಗುತ್ತಿವೆ. ಇದರಿಂದಾಗಿ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿರಲಿಲ್ಲ’ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ತಿಳಿಸಿದರು.

‘ಇನ್ನು ಮುಂದೆ ದೀರ್ಘಾವಧಿ ಪ್ರವಾಸಗಳ ಬದಲು 2–3ದಿನಗಳಿಗಷ್ಟೇ ಸೀಮಿತವಾಗಿರುವ ಅಲ್ಪಾವಧಿ ಪ್ರವಾಸಗಳನ್ನು ಆಯೋಜಿಸುವ ಚಿಂತನೆ ಇದೆ. ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಇದರಿಂದ ಸಾಧ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.