ಬೆಂಗಳೂರು: ಮೆಟ್ರೊ ರೈಲು ಮಾರ್ಗಕ್ಕೆ 872 ಮರಗಳು ನಾಶಪಡಿಸುವ ಮುನ್ನ ತಜ್ಞರ ಅಭಿಪ್ರಾಯ ಪಡೆದುಕೊಳ್ಳಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಮತ್ತು ರಾಜ್ಯ ಸರ್ಕಾರ ಸಿದ್ಧವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.
ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
‘ಮರಗಳನ್ನು ಕಡಿಯಬಹುದೇ ಅಥವಾ ಸ್ಥಳಾಂತರ ಮಾಡಬಹುದೇ ಎಂಬುದನ್ನು ತಜ್ಞರ ಸಮಿತಿಯಿಂದ ವರದಿ ಪಡೆಯಬಹುದಾಗಿದೆ. ಹೊಸದಾಗಿ ತಜ್ಞರ ಸಮಿತಿ ನೇಮಕ ಆಗಬೇಕಿಲ್ಲ. ಈಗಾಗಲೇ ನೇಮಿಸಿರುವ ತಜ್ಞರ ಸಮಿತಿ ಇದೆ’ ಎಂದು ಪೀಠ ತಿಳಿಸಿತು.
‘ಮೆಟ್ರೊ ರೈಲು ಮಾರ್ಗಕ್ಕೆ ಕಡಿಯಲು ಉದ್ದೇಶಿಸಿರುವ ಮರಗಳು ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆಯ ವ್ಯಾಪ್ತಿಯಲ್ಲಿ ಇಲ್ಲ’ ಎಂದು ಬಿಎಂಆರ್ಸಿಎಲ್ ವಿವರಿಸಿತು.
‘ಕಾನೂನಿನ ಹೊರತಾಗಿಯೂ ಸಾರ್ವಜನಿಕರ ನಂಬಿಕೆಗೆ ಬದ್ಧವಾಗಿ ಬಿಎಂಆರ್ಸಿಎಲ್ ಮತ್ತು ಸರ್ಕಾರ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದ ಪೀಠ, ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಒಂದು ವಾರ ಸಮಯ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.