ADVERTISEMENT

ಕೆಐಎಡಿಬಿ ಕಚೇರಿ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 20:02 IST
Last Updated 15 ಅಕ್ಟೋಬರ್ 2019, 20:02 IST

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಚೇರಿಯ ಕಟ್ಟಡದಲ್ಲೇ ಇರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂ ಸ್ವಾಧೀನ ಅಧಿಕಾರಿ (ಎಸ್‌ಎಲ್‌ಒ 2) ಕಚೇರಿ ಮೇಲೆ ದಾಳಿ ನಡೆಸಿ ರೈತರಿಂದ ಶೇ 10ರ ರಷ್ಟು ಲಂಚ‍ಪಡೆಯುತ್ತಿದ್ದ ಆರೋಪದ ಮೇಲೆ ಏಳು ಮಂದಿ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ₹ 10 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ದಾಬಸ್‌ ಪೇಟೆ ಬಳಿಯ ಸೋಂಪುರ ಕೈಗಾರಿಕಾ ಪ್ರದೇಶಕ್ಕೆ 800 ಎಕರೆ ರೈತರ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಜಮೀನುಗಳಿಗೆ ಪರಿಹಾರ ನೀಡಲು ರೈತರಿಂದ ಚೆಕ್‌ ಮೂಲಕ ಒಟ್ಟು ಮೌಲ್ಯದ ಶೇ 10ರಷ್ಟು ಲಂಚವನ್ನು ಅಧಿಕಾರಿಗಳು ಪಡೆಯುತ್ತಿದ್ದರು.

ಈ ಉದ್ದೇಶಕ್ಕಾಗಿ ಕೆಐಎಡಿಬಿ ಭೂಸ್ವಾಧೀನ ಕಚೇರಿಯ ಅಧಿಕಾರಿಗಳು ಮಧ್ಯವರ್ತಿಗಳನ್ನು ನೇಮಿಸಿಕೊಂಡಿದ್ದರು. ರೈತರನ್ನು ಮಧ್ಯವರ್ತಿಗಳು ಸಂಪರ್ಕಿಸಿ ಲಂಚದ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಟ್ಟವರ ಖಾತೆಗಳಿಗೆ ಮಾತ್ರ ಆರ್‌ಟಿಜಿಎಸ್‌ ಮೂಲಕ ಪರಿಹಾರದ ಹಣ ಸಂದಾಯವಾಗುತಿತ್ತು. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರುಗಳು ಬಂದಿದ್ದವು.

ADVERTISEMENT

ಮಂಗಳವಾರ ಸಂಜೆ ಭೂ ಸ್ವಾಧೀನ ಅಧಿಕಾರಿ ಕಚೇರಿ 2ರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ರೈತರಿಂದ ಪಡೆದಿದ್ದ ಮೂರ್ನಾಲ್ಕು ಚೆಕ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಎಸಿಬಿ ಐಜಿಪಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ನೇತೃತ್ವವನ್ನು ಎಸ್‌‍ಪಿ ಜಿನೇಂದ್ರ ಕಣಗಾವಿ ವಹಿಸಿದ್ದರು. ಸಂಜೆ ಖನಿಜ ಭವನದಿಂದ ಹೊರಟಿದ್ದ ಎಲ್ಲ ಕಾರುಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.