ಬೆಂಗಳೂರು: ಸಿಟಿ ಮಾರುಕಟ್ಟೆ ಸಮೀಪದ ಮೇಲ್ಸೇತುವೆಯಲ್ಲಿ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಖಲೀಲ್ ಶಂಷೀರ್ (21) ಎಂಬುವರು ಮೃತಪಟ್ಟು, ಅವರ ಸ್ನೇಹಿತ ಸರ್ಫರಾಜ್ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಖಲೀಲ್, ಆರು ತಿಂಗಳ ಹಿಂದೆ ನಗರಕ್ಕೆ ಬಂದು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಹೊಸಗುಡ್ಡದಹಳ್ಳಿಯಲ್ಲಿ ನೆಲೆಸಿದ್ದ ಅವರಿಗೆ, ಸ್ಥಳೀಯ ನಿವಾಸಿ ಸರ್ಫರಾಜ್ ಜತೆ ಸ್ನೇಹ ಬೆಳೆದಿತ್ತು. ಬುಧವಾರ ನಸುಕಿನಲ್ಲಿ (4.30ರ ಸುಮಾರಿಗೆ) ಇಬ್ಬರೂ ಪ್ರಾರ್ಥನೆ ಸಲುವಾಗಿ ದರ್ಗಾಕ್ಕೆತೆರಳುತ್ತಿದ್ದಾಗ ದುರಂತ ಸಂಭವಿಸಿದೆ.
ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಖಲೀಲ್, ಮೇಲ್ಸೇತುವೆಯಲ್ಲಿ ನಿಯಂತ್ರಣ ಕಳೆದುಕೊಂಡರು. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಬೈಕ್, ತಡೆಗೋಡೆಗೆ ಗುದ್ದಿತು. ತಲೆಗೆ ಪೆಟ್ಟಾಗಿ ಖಲೀಲ್ ಸ್ಥಳದಲ್ಲೇ ಕೊನೆಯುಸಿರೆಳೆದರು. ಸರ್ಫರಾಜ್ ಬೆನ್ನಿಗೆ ಪೆಟ್ಟು ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.