ಬೆಂಗಳೂರು: ಹೆಬ್ಬಾಳ ಬಳಿ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದರಿಂದ ಲಾರಿ ಹಾಗೂ ಬೈಕ್ ಸುಟ್ಟಿದ್ದು, ಸವಾರ ಸುಮನ್ ಬಾನಿಕ್ (22) ಎಂಬುವರು ಮೃತಪಟ್ಟಿದ್ದಾರೆ.
‘ಸ್ಥಳೀಯ ಕನಕನಗರದ ನಿವಾಸಿ ಸುಮನ್ ಬಾನಿಕ್, ಶುಕ್ರವಾರ ನಸುಕಿನ 3.45 ಗಂಟೆ ಸುಮಾರಿಗೆ ಬೈಕ್ನಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಸದಾಶಿವನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.
‘ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ಕಡೆಯಿಂದ ಮೇಖ್ರಿ ವೃತ್ತದತ್ತ ಏಕಮುಖ ರಸ್ತೆಯಲ್ಲಿ ಲಾರಿ (ಎಪಿ 04 ಯುಬಿ 1189) ಹೊರಟಿತ್ತು. ಅದೇ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸುಮನ್ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದರು. ಇದೇ ಸಂದರ್ಭದಲ್ಲೇ ಲಾರಿ, ಬೈಕ್ಗೆ ಡಿಕ್ಕಿ ಹೊಡೆದಿತ್ತು.’
‘ಸುಮನ್ ಸಮೇತವಾಗಿ ಬೈಕ್ನ್ನು 100 ಮೀಟರ್ವರೆಗೂ ಲಾರಿ ಉಜ್ಜಿಕೊಂಡು ಹೋಗಿತ್ತು. ಈ ಅಪಘಾತದಿಂದಾಗಿ ಲಾರಿಯ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಉರಿಯಲಾರಂಭಿಸಿತ್ತು. ಕೆಲ ನಿಮಿಷಗಳಲ್ಲೇ ಬೈಕ್, ಸಂಪೂರ್ಣ ಸುಟ್ಟುಹೋಯಿತು. ಲಾರಿ ಸಹ ಭಾಗಶಃ ಸುಟ್ಟಿತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಹೋಗಿ ಅಗ್ನಿಶಾಮಕದ ದಳದ ಸಿಬ್ಬಂದಿ ಜೊತೆ ಬೆಂಕಿ ನಂದಿಸಿದರು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.