ADVERTISEMENT

ನೇಪಾಳದ ಯುವತಿ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 20:31 IST
Last Updated 30 ನವೆಂಬರ್ 2022, 20:31 IST
ಕೃಷ್ಣಕುಮಾರಿ
ಕೃಷ್ಣಕುಮಾರಿ   

ಬೆಂಗಳೂರು: ರಾಮಮೂರ್ತಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಯ್ಸಳ ನಗರದ ಟಿ.ಸಿ ಪಾಳ್ಯದಲ್ಲಿ ನೆಲೆಸಿದ್ದ ನೇಪಾಳದ ಕೃಷ್ಣಕುಮಾರಿ ಅಮೈ (23) ಎಂಬ ಯುವತಿಯನ್ನು ಯುವಕ ಕೊಲೆ ಮಾಡಿದ್ದಾನೆ.

ಆರೋಪಿ ನೇಪಾಳದ ಸಂತೋಷ್‌ ಧಮಿ (25) ಎಂಬಾತನನ್ನು ಪೊಲೀಸರು ಬಂಧಿಸಿದ್ಧಾರೆ. ಹೆವನ್‌ ಯೂನಿಸೆಕ್ಸ್ ಅಂಡ್‌ ಸ್ಪಾದಲ್ಲಿ ಕೃಷ್ಣಕುಮಾರಿ ಕೆಲಸ ಮಾಡುತ್ತಿದ್ದರು.

‘ಟಿ.ಸಿ ಪಾಳ್ಯದ ಮುಖ್ಯರಸ್ತೆಯ ಬ್ಲಾಕ್‌ ಅಂಡ್‌ ವೈಟ್‌ ಎಂಆರ್‌ಪಿ ಶಾಪ್‌ 5ನೇ ಮಹಡಿಯ ಕೊಠಡಿಯಲ್ಲಿ ಇಬ್ಬರೂ ಸಹಜೀವನ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಸಂತೋಷ್‌ ಧಮಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿದ್ದಾರೆ’ ಎಂದು ಡಿಸಿಪಿ ಭೀಮಾಶಂಕರ್‌ ಗುಳೇದ ತಿಳಿಸಿದರು.

ADVERTISEMENT

‘ಸಹಜೀವನ ನಡೆಸುತ್ತಿದ್ದರೂ ಮತ್ತೊಬ್ಬ ಯುವಕನ ಜೊತೆಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಕ್ಕೆ ಹಲ್ಲೆ ನಡೆಸಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಮಂಗಳವಾರ ರಾತ್ರಿ 9.30ರ ವೇಳೆಗೆ ಸ್ನೇಹಿತರಿಗೆ ವಿಡಿಯೊ ಕಾಲ್‌ ಮಾಡಿದಾಗ ಹಲ್ಲೆ ನಡೆಸುತ್ತಿರುವುದು ಕಾಣಿಸಿತ್ತು. ಇಬ್ಬರೂ ನೆಲೆಸಿದ್ದ ಸ್ಥಳಕ್ಕೆ ನಿರ್ಮಲಾ ಹಾಗೂ ಸೋನು ರ್‍ಯಾಪಿಡೊ ಬೈಕ್‌ನಲ್ಲಿ ಬಂದು ನೋಡುವಷ್ಟರಲ್ಲಿ ಕೃಷ್ಣಕುಮಾರಿ ಮಂಚದ ಮೇಲೆ ರಕ್ತದಮಡುವಿನಲ್ಲಿ ಬಿದ್ದಿದ್ದರು. ಇಬ್ಬರು ಸ್ನೇಹಿತರು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿಯೇ ಆಕೆ ಮೃತಪಟ್ಟಿದ್ದರು’ ಎಂದು ತಿಳಿಸಿದರು.

‘ಇಬ್ಬರೂ ಪ್ರತ್ಯೇಕ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಸ್ನೇಹ ಬೆಳೆದು ಸಹ ಜೀವನ ನಡೆಸುತ್ತಿದ್ದರು. ಸಂತೋಷ್‌ ಮೂರು ವರ್ಷಗಳ ಹಿಂದೆ ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ. ಈತ ಫುಟ್‌ಬಾಲ್‌ ಆಟಗಾರ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.