ADVERTISEMENT

‘ವರ್ಗ ರಾಜಕಾರಣವಾಗಿ ಬದಲಾಗಲಿ’

ರಾಜ್ಯಮಟ್ಟದ ಆನ್‌ಲೈನ್‌ ಯುವಜನ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 23:28 IST
Last Updated 8 ನವೆಂಬರ್ 2020, 23:28 IST

ಬೆಂಗಳೂರು: ‘ಸಮಾಜದ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ದೇಶವು ಜಾತಿ ಮತ್ತು ಧರ್ಮದ ರಾಜಕಾರಣದಿಂದ ವರ್ಗ ರಾಜಕಾರಣದತ್ತ ಸಾಗಬೇಕಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಚಂದ್ರಪೂಜಾರಿ ಹೇಳಿದರು.

ಎಐಡಿವೈಒ (ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್ ಆರ್ಗನೈಸೇಷನ್) ಭಾನುವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಯುವಜನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ತೀವ್ರ ನಿರುದ್ಯೋಗ ಇದೆ. 2018ರಲ್ಲಿ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯ 90 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದಾಗ 2.8 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ದೇಶದಲ್ಲಿ ಸದ್ಯ 100 ಜನರಲ್ಲಿ 35 ಮಂದಿಗೆ ಮಾತ್ರ ಉದ್ಯೋಗವಿದೆ’ ಎಂದು ಅವರು ಹೇಳಿದರು.

ADVERTISEMENT

ಎಐಡಿವೈಒ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ‘ಪ್ರತಿ ಯುವಕನೂ ನಿರುದ್ಯೋಗಕ್ಕೆ ಸಂಬಂಧಿಸಿದ ಆರ್ಥಿಕ, ಸಾಮಾಜಿಕ, ರಾಜಕೀಯ ಮಗ್ಗಲುಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಪರಿಹಾರ ಅಸಾಧ್ಯ’ ಎಂದರು.

‘ಈ ಸಮಸ್ಯೆ ಭೀಕರವಾಗಿದ್ದರೂ ಸರ್ಕಾರಗಳ ನೀತಿಗಳು ಬಂಡವಾಳಶಾಹಿಗಳನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುವ ದಿಕ್ಕಿನಲ್ಲಿವೆ. ನಿರುದ್ಯೋಗ ನಿವಾರಣೆಗೆ ತಡೆರಹಿತವಾದ ಕೈಗಾರಿಕೀಕರಣ ನಡೆಯಬೇಕು. ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ’ ಎಂದರು.

‘ನಿರುದ್ಯೋಗಿ ಯುವಸಮೂಹದಲ್ಲಿ ಶೇ 10ರಷ್ಟು ಜನ ಈ ಹೋರಾಟಕ್ಕೆ ಸಂಘಟಿತರಾಗಿ ಧುಮುಕಿದರೂ ಸಂಸತ್ತು, ವಿಧಾನಸಭೆಗಳು ನಡುಗುತ್ತವೆ. ದೇಶದ ಮೂಲೆ–ಮೂಲೆಯಲ್ಲಿ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಹೋರಾಡಬೇಕು’ ಎಂದು ಹೇಳಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಎಂ.ಉಮಾದೇವಿ, ಕಾರ್ಯದರ್ಶಿ ಡಾ.ಜಿ.ಎಸ್. ಕುಮಾರ್, ಉಪಾಧ್ಯಕ್ಷ ಲಕ್ಷ್ಮಣ್ ಜಡಗನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.