ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡನೆ ವೇಳೆ ‘ದೋಸ್ತಿ’ ಕೂಟದ ಶಾಸಕರು ಬಹುತೇಕ ವೇಳೆ ಮೌನಕ್ಕೆ ಶರಣಾಗಿದ್ದರು. ವಿರೋಧ ಪಕ್ಷ ಬಿಜೆಪಿಯ ಸದಸ್ಯರು ಕೀಟಲೆ ಮಾಡುವುದಕ್ಕೆ ಸಮಯ ಮೀಸಲಿಟ್ಟರು.
ಕುಮಾರಸ್ವಾಮಿ ಅವರು ಬಜೆಟ್ ಓದಲು ಆರಂಭಿಸಿದರು. ‘ಚುನಾವಣೆಗೆ ಮುನ್ನ ಪರಸ್ಪರ ಸೆಣಸಾಡಿದ ಎರಡು ಪಕ್ಷಗಳು ಫಲಿತಾಂಶದ ನಂತರ ಮೈತ್ರಿ ಸಾಧಿಸಿ, ಸರ್ಕಾರ ರಚಿಸಿರುವುದು ಪ್ರಜಾಪ್ರಭುತ್ವದ ಸೊಬಗು’ ಎಂದು ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಬಣ್ಣಿಸಿದರು. ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಿದರು.
ಕುವೆಂಪು ಅವರ ಗೀತೆಯ ಭಾಗವನ್ನು ಓದಿದರು. ‘ಶ್ರೀಸಾಮಾನ್ಯನ ದೀಕ್ಷಾಗೀತೆಯು ನಮ್ಮ ನಾಡಿನ ಬಗ್ಗೆ ಮೈತ್ರಿ ಸರ್ಕಾರದ ಮುನ್ನೋಟವಾಗಲಿದೆ. ಸರ್ಕಾರದ ನಡೆನುಡಿಯೆಲ್ಲವೂ ‘ಕರ್ನಾಟಕ’ ಕೇಂದ್ರೀಕೃತವಾಗಲಿದೆ’ ಎಂದರು. ಮುಖ್ಯಮಂತ್ರಿ
ಎರಡು ಸಲ ತಪ್ಪು ಅಂಕಿ ಅಂಶಗಳನ್ನು ಹೇಳಿದರು. ಅದನ್ನು ಬಿಜೆಪಿ ಸದಸ್ಯರು ತಿದ್ದಿದರು.
ರೈತರ ಸಾಲ ಮನ್ನಾ ಪ್ರಕಟಿಸಿದಾಗ ಜೆಡಿಎಸ್ ಸದಸ್ಯರು ಸಂಭ್ರಮ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರ ಕಡೆಯಿಂದ ಯಾವುದೇ ಪ್ರತಿಸ್ಪಂದನ ಬರಲಿಲ್ಲ. ಸಾಲಮನ್ನಾ ಮೊತ್ತ ₹34 ಸಾವಿರ ಕೋಟಿ ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.