ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಶ್ರಮದಿಂದ ದಲಿತ ಸಮುದಾಯ ಸುಸ್ಥಿತಿಯಲ್ಲಿದೆ. ಇದನ್ನು ದಲಿತ ಸಮುದಾಯದ ನೌಕರರು ಅರ್ಥ ಮಾಡಿಕೊಂಡು ಸಶಕ್ತ ಸಂಘಟನೆ ಕಟ್ಟಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಂಟಿ ನಿರ್ದೇಶಕ ಮಹಾಲಿಂಗಯ್ಯ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪರ್ವ) ಪರಿಶಿಷ್ಟ ಜಾತಿ ಮತ್ತು ಪರಿಷ್ಟ ಪಂಗಡ ನೌಕರರ ಸಂಘದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬುದ್ಧರಿಂದ ಮೊದಲುಗೊಂಡು ಫುಲೆ ದಂಪತಿ, ಶಾಹು ಮಹಾರಾಜ್ ಅವರಂತಹ ಮಹಾನ್ ಮಾನವತಾವಾದಿಗಳ ದೂರದೃಷ್ಟಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಈ ದೇಶವನ್ನು ಬಲಿಷ್ಠವಾಗಿ ರೂಪಿಸುವ ಶಕ್ತಿ ಮತ್ತು ಅವಕಾಶ ಸಿಕ್ಕಿತು. ಹಾಗೆಯೇ ದಲಿತ ಸಮುದಾಯದ ಪ್ರತಿಭೆಗಳನ್ನು ಸಮುದಾಯದ ನೌಕರ ಬಂಧುಗಳು ಗುರುತಿಸಿ ಬೆಳೆಸಬೇಕು’ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತಿಯಾದ ಹಾಗೂ ಪದೋನ್ನತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರನ್ನು ಸನ್ಮಾನಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಂಟಿ ನಿರ್ದೇಶಕ ಎನ್. ರಾಜು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕ ಪಾಲಾಕ್ಷ, ಇಲಾಖೆಯ ಉಪನಿರ್ದೇಶಕರಾದ ನರಸಿಂಹ ಮೂರ್ತಿ, ಪುಷ್ಪಾ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಜಯರಾಮ್, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಅನುದಾನಿತ ಕಾಲೇಜುಗಳ ಸಂಘದ ಅಧ್ಯಕ್ಷ ಹರೀಶ್, ನೌಕರರ ಸಂಘದ ಬೆಂಗಳೂರು ವಿಭಾಗದ ಅಧ್ಯಕ್ಷ ಲಕ್ಷ್ಮಣಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.