ಯಲಹಂಕ: ಪ್ರಜಾವಿಮೋಚನಾ ಚಳವಳಿ(ಸ್ವಾಭಿಮಾನ) ಮತ್ತು ಅಖಿಲ ಕರ್ನಾಟಕ ದಲಿತ ಅಭಿವೃದ್ಧಿ ಸಮಿತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಕಾರ್ಯಕರ್ತರು, ಬ್ಯಾಟರಾಯನಪುರ ಕ್ಷೇತ್ರದ ಕಟ್ಟಿಗೇನಹಳ್ಳಿಯ ರೇವಾ ವೃತ್ತದಲ್ಲಿ ಭಾನುವಾರ ಮಧ್ಯರಾತ್ರಿ ಅಂಬೇಡ್ಕರ್ರವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.
ಅಂಬೇಡ್ಕರ್ ದಂಪತಿಯ ಭಾವಚಿತ್ರಕ್ಕೆ ಹೂಮಾಲೆಹಾಕಿ ಪೂಜೆ ನೆರವೇರಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಎಲ್ಲರಿಗೂ ಸಿಹಿಹಂಚುವ ಮೂಲಕ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಪ್ರಜಾವಿಮೋಚನಾ ಚಳವಳಿ(ಸ್ವಾಭಿಮಾನ)ರಾಜ್ಯಘಟಕದ ಅಧ್ಯಕ್ಷ ಮುನಿ ಆಂಜಿನಪ್ಪ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ರವರು ಈ ದೇಶ ದಲ್ಲಿ ಹುಟ್ಟದೇ ಹೋಗಿದ್ದರೆ, ತುಳಿತಕ್ಕೊಳಗಾದ ಮತ್ತು ತಳಸಮುದಾಯದ ಜನರ ಬದುಕು ದುಸ್ತರವಾಗುತ್ತಿತ್ತು. ಎಲ್ಲೆಲ್ಲೂ ಅಸ್ಪೃಶ್ಯತೆ, ಅಸಮಾನತೆ ತಾಂಡವವಾಡುತ್ತಿತ್ತು. ದೇಶಕ್ಕೆ ಸಂವಿಧಾನದ ಮೂಲಕ ಕೆಳವರ್ಗದವರಿಗೆ ರಾಜಕೀಯ, ಸಾಮಾಜಿಕ ಸಮಾನತೆ ಕಲ್ಪಿಸಿಕೊಟ್ಟರು. ಅದರಡಿಯಲ್ಲಿ ನಾವಿಂದು ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವದಿಂದ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ದಲಿತ ಅಭಿವೃದ್ಧಿ ಸಮಿತಿಯ ರಾಜ್ಯಘಟಕದ ಅಧ್ಯಕ್ಷ ಪಿ.ಕೆ.ಸುಬ್ರಮಣಿ, ಯುವಘಟಕದ ರಾಜ್ಯಾಧ್ಯಕ್ಷ ಅಜಯ್.ಜಿ.ಮೌರ್ಯ, ಪ್ರಜಾವಿಮೋಚನಾ ಚಳವಳಿಯ ಮುಖಂಡರಾದ ಎಂ.ಅಭಿಲಾಷ್ಕುಮಾರ್, ಕಾಂತರಾಜು, ಸತೀಶ್ ಹೊಸಹಳ್ಳಿ, ಥಣಿಸಂದ್ರ ಸಿ.ಚಂದ್ರು, ಶಿವು ಶಿವಪುರ, ಲಘುಮಯ್ಯ, ಹನುಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.