ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ‘ಅಂಬೇಡ್ಕರ್ ಥೀಂ ಪಾರ್ಕ್’ ನಿರ್ಮಿಸುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವ ಸಲ್ಲಿಸಿದೆ.
ಮುಖ್ಯಮಂತ್ರಿಯ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಈ ಪ್ರಸ್ತಾವದ ಬಗ್ಗೆ ಚರ್ಚಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಮಹಾದ್ವಾರ (ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿರುವ ಪ್ರವೇಶದ್ವಾರ) ಮತ್ತು ಜ್ಞಾನಭಾರತಿ ಆವರಣದ ಎನ್ಎಸ್ಎಸ್ ಭವನದ ನಡುವೆ ಥೀಂ ಪಾರ್ಕ್ ನಿರ್ಮಿಸಲು 25 ಎಕರೆ ಜಾಗವನ್ನು ಗುರುತಿಸಲಾಗಿದೆ.
ಈ ಜಾಗವು ವಿಶ್ವವಿದ್ಯಾಲಯದ ಆವರಣದಲ್ಲಿ ಇರುವುದರಿಂದ ಉನ್ನತ ಶಿಕ್ಷಣ ಇಲಾಖೆಯ ಸುಪರ್ದಿಗೆ ಬರುತ್ತದೆ. ಹೀಗಾಗಿ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ, 25 ಎಕರೆ ಜಾಗವನ್ನು ಹಸ್ತಾಂತರಿಸಲು ಕ್ರಮ ತೆಗೆದುಕೊಳ್ಳಬೇಕು. ಅಂಬೇಡ್ಕರ್ ಥೀಂ ಪಾರ್ಕ್ ಸ್ಥಾಪನೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲೇ ₹200 ಕೋಟಿ ಮೀಸಲಿಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯು ಕೋರಿದೆ.
ಏನೇನಿರಲಿದೆ... * ಅಂಬೇಡ್ಕರ್ ಅವರ 200 ಅಡಿ ಎತ್ತರದ ಪ್ರತಿಮೆ * ಅಂಬೇಡ್ಕರ್ ಅವರ ಬದುಕು ಬರಹ ಸಾಧನೆ ಹಾಗೂ ಭಾರತ ಸಂವಿಧಾನ ರಚನೆಯ ಇತಿಹಾಸದ ವಸ್ತು ಸಂಗ್ರಹಾಲಯ * ಅಂಬೇಡ್ಕರ್ ಸ್ಮಾರಕ ಬೃಹತ್ ಗ್ರಂಥಾಲಯ * ಬೌದ್ಧ ಸ್ತೂಪ ಮತ್ತು ವಿವಿಧ ಶಿಲ್ಪ ಕಲಾಕೃತಿಗಳು * ಸಮ್ಮೇಳನ ಸಭಾಂಗಣ ಕಿರು ಚಿತ್ರಮಂದಿರ * ಉದ್ಯಾನವನ ಸಂಗೀತ ಕಾರಂಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.