ಬೆಂಗಳೂರು: ಆ್ಯಂಬಿಡೆಂಟ್ ಪ್ರಕರಣದ ಪ್ರಮುಖ ಆರೋಪಿ ಫರೀದ್ ರಕ್ಷಣೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನಿಂತಿದ್ದಾರೆ. ಇದರಿಂದ ತನಿಖೆ ಹಳ್ಳಹಿಡಿಯುತ್ತಿದೆ. ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ವರ್ಗಾಯಿಸಬೇಕು ಎಂದು ಹಣ ಕಳೆದುಕೊಂಡ ಸಂತ್ರಸ್ತರು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಪ್ರಕರಣದಲ್ಲಿ ರಕ್ಷಣೆ ಕೊಟ್ಟರೆ ಹಣ ನೀಡುವುದಾಗಿ ಅಲೋಕ್ ಕುಮಾರ್ಗೆ ಫರೀದ್ ಬೇಡಿಕೆ ಇಟ್ಟಿದ್ದರು. ಮಾಲೀಕನ ಜೊತೆಗೂಡಿ ಪ್ರಕರಣವನ್ನು ಮುಚ್ಚಿ ಹಾಕಲು ಅಲೋಕ್ ಮುಂದಾಗಿದ್ದಾರೆ. ಆರೋಪಿ ಫರೀದ್ಗೆ ರಾಜ ಮರ್ಯಾದೆ ಕೊಡುತ್ತಿದ್ದಾರೆ. ಹಣದ ಆಸೆಗಾಗಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯೀದ್ ಖಾನ್ (ಆ್ಯಂಬಿಡೆಂಟ್ ಕಂಪನಿಯಲ್ಲಿ ₹75 ಲಕ್ಷ ಹಣ ಹೂಡಿಕೆ ಮಾಡಿ
ದ್ದರು), ‘ಫರೀದ್ ಮತ್ತು ಅಲೋಕ್ ನಡುವಿನ ಸಂಬಂಧವನ್ನು ಬಯಲಿಗೆ ತರಲು ಪ್ರಯತ್ನಿಸಿದ್ದಕ್ಕೆ, ಸಿಸಿಬಿ ಮುಖ್ಯಸ್ಥರಿಂದ ಬೆದರಿಕೆ ಕೆರೆಗಳು ಬರುತ್ತಿವೆ. ತನಿಖೆ ನಡೆಸುವಂತೆ ಡಿಜಿಪಿ ನೀಲಮಣಿರಾಜು ಅವರಿಗೂ ದೂರು ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.
‘ಫರೀದ್ ಜಾಮೀನು ಪಡೆಯಲು ಅಲೋಕ್ ಅವರೇ ಸಹಾಯ ಮಾಡಿದ್ದರು. ಹೀಗಾಗಿ ಸಿಸಿಬಿಯಿಂದ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ’ ಎಂದು ಅವರು ಹೇಳಿದರು. ‘ದುಬೈ, ಬೆಂಗಳೂರು, ಬಳ್ಳಾರಿ ಮತ್ತು ಮೈಸೂರಿನಲ್ಲಿ ಕಚೇರಿಗಳಿವೆ. ಪೊಲೀಸರು ಬೆಂಗಳೂರಲ್ಲಿ ಮಾತ್ರ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಆರೋಪಿಯ ಆಸ್ತಿ ಜಪ್ತಿಗೂ ಪ್ರಯತ್ನಿಸುತ್ತಿಲ್ಲ. ಬದಲಾಗಿ ಆತನೊಂದಿಗೆ ಊಟ ಮಾಡಲು ಅಲೋಕ್ ಐಷಾರಾಮಿ ಹೋಟೆಲ್ಗೆ ಹೋಗುತ್ತಾರೆ’ ಎಂದು ದೂರಿದರು.
ಆ್ಯಂಬಿಡೆಂಟ್ ಕಂಪನಿ ವಿರುದ್ಧ ಸಿಸಿಬಿ ಪೊಲೀಸರು ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ (ಕೆಪಿಐಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.