ಬೊಮ್ಮನಹಳ್ಳಿ: ‘ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿ, ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿ, ಅಘೋಷಿತ ತುರ್ತುಪರಿಸ್ಥಿತಿಯನ್ನು ಹೇರಿರುವ ಬಿಜೆಪಿಯು, ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಬನ್ನೇರುಘಟ್ಟ ರಸ್ತೆ ದಿಣ್ಣೆಪಾಳ್ಯ ಗ್ರಾಮದಲ್ಲಿ ಪ್ರಭಾಕರ ರೆಡ್ಡಿ ನೇತೃತ್ವದಲ್ಲಿ ಜೆಡಿಎಸ್ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡವರಿಗೆ ದಿನಸಿ ವಿತರಿಸಿ ಮಾತನಾಡಿದರು.
‘ಶಾಸಕರನ್ನು ಖರೀದಿಸಿದ್ದಾಯಿತು, ಇದೀಗ ನಗರಸಭೆ ಸದಸ್ಯರನ್ನೂ ಖರೀದಿಸುವ ಹೀನ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸಂತೋಷ್ ಎಂಬಾತ ನೇರವಾಗಿ ಹಣದ ಆಮಿಷ ಒಡ್ಡಿದ್ದು, ನಮ್ಮ ಬಳಿ ಸಾಕ್ಷಿ ಇದೆ. ಇದು ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ಕಿಂಚಿತ್ತೂ ವಿಶ್ವಾಸವಿಲ್ಲ ಎಂಬುದಕ್ಕೆ ಸಾಕ್ಷಿ’ ಎಂದರು.
‘ರಾಜ್ಯದಲ್ಲಿ ಕೊರೊನಾವನ್ನು ತಹಬದಿಗೆ ತರುವಲ್ಲಿ, ಜನರ ಪ್ರಾಣ ಉಳಿಸುವಲ್ಲಿ ಸೋತಿರುವ ಸರ್ಕಾರ, ಎಲ್ಲೆಡೆ ಲೂಟಿಗೆ ಇಳಿದಿದೆ. ಕಾರ್ಮಿಕ ಇಲಾಖೆ ಮೂಲಕ ಕಾರ್ಮಿಕರಿಗೆ ಕಳಪೆ ದಿನಸಿ ಕಿಟ್ ನೀಡಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಬಿಜೆಪಿ ಶಾಸಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಖರ್ಚು ಮಾಡಿ, ದಿನಸಿ ಕಿಟ್ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಜೆಡಿಎಸ್ ವತಿಯಿಂದ ದಕ್ಷಿಣ ವಿಧಾನ ವಿಧಾನಸಭಾ ಕ್ಷೇತ್ರದಲ್ಲಿ 40 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದ್ದು, ಹಂತಹಂತವಾಗಿ ಕ್ಷೇತ್ರದ ಎಲ್ಲ ಕುಟುಂಬಗಳಿಗೂ ದಿನಸಿ ವಿತರಣೆ ಮಾಡುತ್ತೇವೆ’ ಎಂದು ಜೆಡಿಎಸ್ ಮುಖಂಡ ಪ್ರಭಾಕರ ರೆಡ್ಡಿ ಹೇಳಿದರು.
ಜೆಡಿಎಸ್ ಮುಖಂಡರಾದ ಗೊಟ್ಟಿಗೆರೆ ಮಂಜಣ್ಣ, ಕಮ್ಮನಹಳ್ಳಿ ಅನಂತುಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.