ಬೆಂಗಳೂರು: ‘ಶಿಕ್ಷಕರಾದವರು ಕಟ್ಟಡದ ನಾಲ್ಕು ಗೋಡೆಗಳ ನಡುವೆ ಪಾಠ ಮಾಡುವ ಜತೆಗೆ ಸಮಾಜದ ಎಲ್ಲೆಡೆ ಜ್ಞಾನವನ್ನು ಹರಡಲು ಸಂಚಾರಶಕ್ತಿ ಅಳವಡಿಸಿಕೊಳ್ಳಬೇಕು’ ಎಂದು ಸಾಹಿತಿ ಅ.ರಾ. ಮಿತ್ರ ತಿಳಿಸಿದರು.
ಅ.ನ.ಕೃ. ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾಯ ಅವರಿಗೆ ಅ.ನ.ಕೃ. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಈ ಪ್ರಶಸ್ತಿ ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
‘ಶಿಕ್ಷಕರಾದವರು ಮಕ್ಕಳಿಗೆ ಪಾಠ ಮಾಡುವ ಜತೆಗೆ ಸಮಾಜಕ್ಕೆ ಜ್ಞಾನಾರ್ಜನೆ ಮಾಡಬೇಕು. ಬದಲಾದ ಸನ್ನಿವೇಶದಲ್ಲಿ ಇದು ಆಗುತ್ತಿಲ್ಲ. ಅ.ನ.ಕೃ. ಸಾಹಿತ್ಯ ಸೃಷ್ಟಿಸುತ್ತ ನಾಡು ನುಡಿ ಪರ ಕಾರ್ಯಗಳನ್ನು ಕೈಗೆತ್ತಿಕೊಂಡರು. ಇದೇ ಮಾರ್ಗದಲ್ಲಿ ಶಾ.ಮಂ. ಕೃಷ್ಣರಾಯರು ನಡೆದರು. ಗೋವಾದಲ್ಲಿ ಕನ್ನಡಿಗರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕ ಪ್ರೊ.ಜಿ.ಅಶ್ವತ್ಥ ನಾರಾಯಣ, ‘ಆದರ್ಶ ಶಿಕ್ಷಕರು ಅಪರೂಪವಾಗಿದ್ದಾರೆ. ತರಗತಿ ಹಾಗೂ ಶಾಲೆಗೆ ಮಾತ್ರ ಸೀಮಿತರಾಗುತ್ತಿರುವುದು ವಿಪರ್ಯಾಸ. ಈ ಹಿಂದೆ ಶಿಕ್ಷಕರಾದವರು ಬಿಡುವಿನ ವೇಳೆಯಲ್ಲಿ ಕನ್ನಡದ ಸೇವೆ ಮಾಡುತ್ತಿದ್ದರು. ಅದೇ ರೀತಿ, ಸಾಹಿತಿಗಳಲ್ಲಿ ಕೂಡ ಬದಲಾವಣೆ ಗುರುತಿಸಬಹುದು. ಕೆಲ ಸಾಹಿತಿಗಳು ನಿರ್ದಿಷ್ಟ ಸ್ಥಳದಲ್ಲಿ ಕುಳಿತು ಸಾಹಿತ್ಯ ಕೃಷಿ ಮಾಡುತ್ತಾರೆ. ಆದರೆ, ಸಾಮಾಜಿಕ ಕಳಕಳಿ ಇರುವ ಸಾಹಿತಿಗಳು ಸಾಹಿತ್ಯ ಸೃಷ್ಟಿಸುತ್ತಲೇ ವಿವಿಧ ಕಾರ್ಯದಲ್ಲಿ ಸಕ್ರಿಯರಾಗಿರುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.