ADVERTISEMENT

ಹೈಕೋರ್ಟ್ ಕ್ಷಮೆಯಾಚಿಸಿದ ಎಸಿಎಸ್‌, ಆಯುಕ್ತ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 21:35 IST
Last Updated 14 ಜುಲೈ 2020, 21:35 IST
   

ಬೆಂಗಳೂರು: ನಗರದ ಕಂಟೈನ್‌ಮೆಂಟ್ ವಲಯಗಳಲ್ಲಿ ಮಾರ್ಗಸೂಚಿ ಜಾರಿ ಮಾಡದ ಮತ್ತು ಅಲ್ಲಿನ ಬಡ ಹಾಗೂ ನಿರ್ಗತಿಕರಿಗೆ ಆಹಾರ ಪೂರೈಸದ ಆಕ್ಷೇಪಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್ ಹೈಕೋರ್ಟ್ ಕ್ಷಮೆ ಯಾಚಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಇಬ್ಬರೂ ಅಧಿಕಾರಿಗಳು, ‘ನಮ್ಮಿಂದ ತಪ್ಪಾಗಿದೆ.‌ ಅದಕ್ಕಾಗಿ ನ್ಯಾಯಾಲಯದ ಕ್ಷಮೆ ಯಾಚಿಸುತ್ತೇವೆ. ಆಗಿರುವ ಎಲ್ಲ ತಪ್ಪು ತಿದ್ದಿಕೊಂಡು ಕೋರ್ಟ್ ಆದೇಶ ಪಾಲನೆ ಮಾಡಲಾಗುವುದು.‌ ನಗರದ ಕಂಟೈನ್‌ಮೆಂಟ್‌ ವಲಯಗಳಲ್ಲಿ ಮಾರ್ಗಸೂಚಿಗಳ‌ನ್ನು ಕಠಿಣವಾಗಿ ಜಾರಿ‌ ಮಾಡುತ್ತೇವೆ.‌ ಅಲ್ಲಿನ ಬಡ ಹಾಗೂ ನಿರ್ಗತಿಕರನ್ನು ಗುರುತಿಸಿ ಆಹಾರ ಪೂರೈಸುತ್ತೇವೆ. ಇದನ್ನು ದೃಢೀಕರಿಸಿ‌ ಪ್ರಮಾಣ ಪತ್ರ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

‘ಏನೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ನ್ಯಾಯಪೀಠ ಕೇಳಿದ್ದು, ಪ್ರಮಾಣ ಪತ್ರ ಸಲ್ಲಿಸಲು ಕಾಲಾವಕಾಶ ನೀಡಿದೆ. ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.