ಬೆಂಗಳೂರು: ಚಿಕ್ಕಬಾಣಾವರದಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಹಬೀಬುರ್ರೆಹಮಾನ್ ನೀಡಿದ್ದ ಮಾಹಿತಿಯ ಬೆನ್ನುಹತ್ತಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಮತ್ತೊಬ್ಬ ಶಂಕಿತ ಉಗ್ರನನ್ನು ಪಶ್ಚಿಮ ಬಂಗಾಲದ ಅಗರ್ತಲದಲ್ಲಿ ವಶಕ್ಕೆ ಪಡೆದಿದ್ದಾರೆ.
ನಜೀರ್ ಶೇಖ್ ಅಲಿಯಾಸ್ ಪತ್ಲಾ ಅನಾಸ್ ಬಂಧಿತ ಆರೋಪಿ. ಈತನನ್ನು ಅಧಿಕಾರಿಗಳು ಎನ್ಐಎ ವಿಶೇಷ ಕೋರ್ಟ್ನಲ್ಲಿ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕಬಾಣಾವರದಲ್ಲಿ ಸಮೀವುಲ್ಲಾ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಿದ್ದ 'ಜೆಎಂಬಿ' (ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್) ಹೆಸರಿನ ಉಗ್ರ ಸಂಘಟನೆಯ ಐವರು ಸದಸ್ಯರ ಪೈಕಿ ಈತನೂ ಒಬ್ಬ. ಶಂಕಿತ ಉಗ್ರರಾದ ಸಜ್ಜದ್ ಅಲಿ, ಖಾದರ್ ಖಾಜಿ, ಅತಾವುರ್ ರೆಹಮಾನ್ ಅಲಿಯಾಸ್ ನಜ್ರುಲ್ ಇಸ್ಲಾಂ ಅಲಿಯಾಸ್ ಮೋಟಾ ಅನಾಸ್, ಆಸೀಫ್ ಇಕ್ಬಾಲ್ ಅಲಿಯಾಸ್ ನದೀಮ್, ಬಾಂಗ್ಲಾ ದೇಶದ ಆರೀಫ್ ಮತ್ತು ರಾಮನಗರದಲ್ಲಿ ಬಂಧಿತನಾಗಿದ್ದ ಜಹೀದುಲ್ ಇಸ್ಲಾಂ ಅಲಿಯಾಸ್ ಕೌಸರ್ ಕೂಡಾ ಇದೇ ಮನೆಯಲ್ಲೇ ಉಳಿದುಕೊಂಡಿದ್ದರು ಎಂದೂ ಹೇಳಲಾಗಿದೆ.
ಶಂಕಿತ ಉಗ್ರರು ಬೆಂಗಳೂರಿನಲ್ಲಿ ಹಣ ಸಂಗ್ರಹಿಸುವ ಜೊತೆಗೆ ಸ್ಫೋಟಕಗಳನ್ನು ತಯಾರಿಸಿ ದೇಶದಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗುತ್ತಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.