ADVERTISEMENT

ಸುಶಾಸನಾ ದಿನಾಚರಣೆ | ಮುಂದಿನದ್ದು ಜ್ಞಾನ, ಕೌಶಲದ ಕಾಲ: ಕೃಷ್ಣೇಗೌಡ

ಸುಶಾಸನಾ ದಿನಾಚರಣೆ, ನಿಪುಣ್‌ ಭಾರತ್‌ ಅಭಿಯಾನದಲ್ಲಿ ಕೃಷ್ಣೇಗೌಡ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 14:27 IST
Last Updated 25 ಡಿಸೆಂಬರ್ 2024, 14:27 IST
ದಿವಾನರಪಾಳ್ಯ ಚಂದ್ರೋದಯ ಕನ್ನಡ ಮಾಧ್ಯಮ ಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸುಶಾಸನಾ ದಿನಾಚರಣೆ ಮತ್ತು ನಿಪುಣ್ ಭಾರತ್ ಅಭಿಯಾನದಲ್ಲಿ ಶಾಲಾ ಮಕ್ಕಳು ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಅವರೊಂದಿಗೆ ಶುಭಾಶಯ ಹಂಚಿಕೊಂಡರು
ಪ್ರಜಾವಾಣಿ ಚಿತ್ರ
ದಿವಾನರಪಾಳ್ಯ ಚಂದ್ರೋದಯ ಕನ್ನಡ ಮಾಧ್ಯಮ ಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸುಶಾಸನಾ ದಿನಾಚರಣೆ ಮತ್ತು ನಿಪುಣ್ ಭಾರತ್ ಅಭಿಯಾನದಲ್ಲಿ ಶಾಲಾ ಮಕ್ಕಳು ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಅವರೊಂದಿಗೆ ಶುಭಾಶಯ ಹಂಚಿಕೊಂಡರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮುಂದೆ ಜ್ಞಾನ ಮತ್ತು ಕೌಶಲಕ್ಕೆ ಆದ್ಯತೆ ಇರಲಿದೆ. ಜ್ಞಾನದ ಕಾಲಕ್ಕೆ ಸರಿಯಾಗಿ ಚಿಂತನೆ ನಡೆಸುವುದನ್ನು ಮಕ್ಕಳಿಗೆ ಕಲಿಸಿಕೊಡಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಕೃಷ್ಣೇಗೌಡ ತಿಳಿಸಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ದಿವಾನರಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಸುಶಾಸನ ದಿನಾಚರಣೆ ಮತ್ತು ನಿಪುಣ್‌ ಭಾರತ್‌ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ದೈಹಿಕವಾಗಿ ಸದೃಢರಾಗಿದ್ದರೆ ಸಾಕಿತ್ತು. ದುಡಿಯುವ ಶಕ್ತಿಯನ್ನಷ್ಟೇ ಆಗ ನೋಡಲಾಗುತ್ತಿತ್ತು. ಆನಂತರ ಆಸ್ತಿಗೆ ಮಹತ್ವ ಬಂತು. ಕಾಲ ಕಳೆದ ಹಾಗೆ ಆಸ್ತಿಗಿಂತ ವಿದ್ಯೆಗೆ ಬಂತು. ವಿದ್ಯೆಗಿಂತ ಉದ್ಯೋಗ ಮುಖ್ಯವಾಯಿತು. ಇನ್ನುಮುಂದೆ ಜ್ಞಾನ, ಕೌಶಲವೇ ಮುಖ್ಯವಾಗಲಿದೆ ಎಂದರು.

ADVERTISEMENT

‘ನಾವು ಆಡುವ ಮಾತು ಮಕ್ಕಳ ಮನಸ್ಸಿಗೆ ಹೋಗಬೇಕು. ಎಲ್ಲವೂ ಕಾಣುತ್ತಿರುತ್ತದೆ, ಕೇಳುತ್ತಿರುತ್ತದೆ. ಅದರಲ್ಲಿ ಏನು ನೋಡಬೇಕು, ಏನು ಕೇಳಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಶಿಕ್ಷಣ ಅಂದರೆ ತಲೆಗೆ ತುಂಬುವುದು ಅಷ್ಟೇ ಆಗಿದೆ. ಮನಕ್ಕೆ ತುಂಬುವ ಕೆಲಸವಾಗಬೇಕು’ ಎಂದರು.

ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ‘ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶ ಕಂಡ ದಕ್ಷ ಆಡಳಿತಗಾರ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದವರು. ಅವರ ಗೌರವಾರ್ಥವಾಗಿ 2014ರಲ್ಲಿ ಸುಶಾಸನ ದಿನವಾಗಿ ಘೋಷಣೆ ಮಾಡಲಾಯಿತು’ ಎಂದು ತಿಳಿಸಿದರು.

‘ತಿಳಿವಳಿಕೆ ಮತ್ತು ಸಂಖ್ಯಾಶಾಸ್ತ್ರದೊಂದಿಗೆ ಓದುವಲ್ಲಿ ಪ್ರಾವೀಣ್ಯಕ್ಕಾಗಿ ರಾಷ್ಟ್ರೀಯ ಉಪಕ್ರಮ’ವನ್ನು (ನಿಪುಣ್‌ ಭಾರತ್‌) 2021ರಲ್ಲಿ ಜಾರಿಗೆ ತರಲಾಯಿತು. ಜ್ಞಾನ ಹಾಗೂ ನೈಪುಣ್ಯಕ್ಕೆ ಒತ್ತು ನೀಡುವ ಮೂಲಕ ಸದೃಢರಾಗಿಸಬೇಕು ಎಂಬುದು ಇದರ ಉದ್ದೇಶ’ ಎಂದು ವಿವರಿಸಿದರು.

‘ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತು ಅಂಗನವಾಡಿಗಳಲ್ಲಿ ನರ್ಸರಿ ಆರಂಭ ಮಾಡುತ್ತಿದ್ದೇವೆ, ಆ ಮೂಲಕ ಸರ್ಕಾರಿ ಶಾಲೆಯಲ್ಲಿಯೂ ಕೂಡ ನರ್ಸರಿ ಪೂರ್ವ, ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭ ಮಾಡುತ್ತಿದ್ದೇವೆ. ಅದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ಹಿಮಾಂಶು ಶಾಲೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಎಲ್ಲರಿಗೂ ಸಮಾನ ಶಿಕ್ಷಣ, ಸಮಾನ ಅವಕಾಶ ನೀಡಲು ಶಿಕ್ಷಣ ಫೌಂಡೇಶನ್‌ ಕೆಲಸ ಮಾಡುತ್ತಿದೆ’ ಎಂದು ಮಾಹಿತಿ ನೀಡಿದರು.

ಅಂಕಿ ಅಂಶದ ಪ್ರಕಾರ 9 ವರ್ಷದೊಳಗೆ ಕಲಿಯಬೇಕಾಗಿರುವ ವಿಚಾರವನ್ನು 7ನೇ ತರಗತಿಯಾದರೂ ಶೇ 50ರಷ್ಟು ಮಕ್ಕಳು ಕಲಿಯುತ್ತಿಲ್ಲ. ಅದಕ್ಕಾಗಿ ಪರೀಕ್ಷೆ ನಡೆಸಿ ಮಕ್ಕಳಲ್ಲಿ ಕಲಿಯಲು ತೊಂದರೆ ಏನಿದೆ ಎಂಬುದನ್ನು ಪತ್ತೆಹಚ್ಚಿ, ಅವರ ಸಾಮರ್ಥ್ಯ ಹೆಚ್ಚಿಸವ ಕೆಲಸ ಮಾಡಲಾಗುತ್ತಿದೆ ಎಂದರು.

ಶಿಕ್ಷಣ ಫೌಂಡೇಶನ್ ಸಿಇಒ ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದರಾಮಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ರಘುಚಂದ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶಕುಂತಲಾದೇವಿ, ಅಶೋಕ್‌, ಹಿಮಾಂಶು ಶಿಕ್ಷಣ ಟ್ರಸ್ಟ್‌ನ ವಿಜಯಕುಮಾರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.