ADVERTISEMENT

ಎಟಿಎಂನಲ್ಲಿ ಕಳವು ಯತ್ನ: ಹೈದರಾಬಾದ್‌ನಿಂದ ಸುಳಿವು

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 20:27 IST
Last Updated 13 ಜನವರಿ 2021, 20:27 IST

ಬೆಂಗಳೂರು: ಜಿಗಣಿಯಲ್ಲಿರುವ ಎಟಿಎಂ ಯಂತ್ರದಲ್ಲಿ ಹಣ ಕದಿಯಲು ಯತ್ನಿಸುತ್ತಿದ್ದ ಆರೋಪಿಯನ್ನು ಹೈದರಾಬಾದ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ನೀಡಿದ ಸುಳಿವಿನಿಂದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಗಣಿಯಲ್ಲಿ ವಾಸವಿದ್ದ ಬಿಹಾರ ಮೂಲದ ಅಮಿತ್ ಮಿಶ್ರಾ ಬಂಧಿತ ಆರೋಪಿ.ಕಾರ್ಡ್‌ಬೋರ್ಡ್‌ ಬಾಕ್ಸ್‌ ಉತ್ಪಾದಕಾ ಘಟಕವೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

‘ಕರ್ಣಾಟಕ ಬ್ಯಾಂಕ್‌ನ ಭದ್ರತಾ ಸಿಬ್ಬಂದಿಯ ಕೇಂದ್ರ ಕಚೇರಿ ಹೈದಾರಾಬಾದ್‌ನಲ್ಲಿದೆ.ಜಿಗಣಿಯಲ್ಲಿದ್ದ ಕರ್ಣಾಟಕ ಬ್ಯಾಂಕ್‌ ಶಾಖೆಯ ಎಟಿಎಂ ಅನ್ನು ಆರೋಪಿ ಮಂಗಳವಾರ ಮಧ್ಯರಾತ್ರಿ 1 ಗಂಟೆಯಲ್ಲಿ ಪ್ರವೇಶಿಸಿದ್ದ’.‌

ADVERTISEMENT

‘ಈತನಚಲನವಲನಗಳನ್ನು ಗಮನಿಸುತ್ತಿದ್ದ ಭದ್ರತಾ ಸಿಬ್ಬಂದಿ, ಅನುಮಾನದಿಂದ ನೋಡಿದಾಗ ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸುತ್ತಿದ್ದ. ಭದ್ರತಾ ಸಿಬ್ಬಂದಿ ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದರು. ಎಟಿಎಂ ಬಳಿ ತೆರಳಿ ಸ್ಥಳದಲ್ಲೇ ಆರೋಪಿಯನ್ನು ಬಂಧಿಸಲಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಇದಕ್ಕೂ ಮುನ್ನ ಪಕ್ಕದಲ್ಲೇ ಇದ್ದ ಎಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂನಲ್ಲೂ ಹಣ ಕದಿಯಲು ಮುಂದಾಗಿದ್ದ. ಈ ವೇಳೆ ಯಂತ್ರವನ್ನು ಹಾನಿಗೊಳಿಸಿದ್ದಾನೆ.ಆದರೆ, ಯಂತ್ರದಲ್ಲಿ ಹಣ ಸಂಗ್ರಹಿಸಿ ಇಡಲಾದ ಭಾಗವನ್ನು ಮುರಿಯಲು ಸಾಧ್ಯವಾಗಿಲ್ಲ. ಬಳಿಕ ಪಕ್ಕದ ಎಟಿಎಂನಲ್ಲಿ ಕೃತ್ಯ ಎಸಗಿ, ಸಿಕ್ಕಿಬಿದ್ದಿದ್ದಾನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.