ಬೆಂಗಳೂರು: ‘ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಹೊಸ ಆಟೊ ರಿಕ್ಷಾಗಳಿಗೆ ನೀಡಲಾಗಿರುವ ಪರವಾನಗಿ ಕೋರ್ಟ್ನ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ’ ಎಂದು ಹೈಕೋರ್ಟ್ ಆದೇಶಿಸಿದೆ.
ಹೊಸ ಆಟೊ ರಿಕ್ಷಾಗಳಿಗೆ ನೀಡಲಾಗುತ್ತಿರುವ ಪರವಾನಗಿ ಪ್ರಶ್ನಿಸಿ ನಗರದ ನಿತಿನ್ ಆರ್.ಪುತ್ತಿಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ಈ ಮಧ್ಯಂತರ ಆದೇಶ ನೀಡಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ವಿವರವಾದ ಮಾಹಿತಿ ಒದಗಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಹೈಕೋರ್ಟ್ ಬೇಸಿಗೆ ರಜೆ ನಂತರಕ್ಕೆ ಮುಂದೂಡಿದೆ.
ಆಕ್ಷೇಪಣೆ ಏನು?: ಸಾರಿಗೆ ಇಲಾಖೆಯು, ಆಟೊ ರಿಕ್ಷಾಗಳ ಪರವಾನಗಿಯನ್ನು 1.25 ಲಕ್ಷದಿಂದ 1.55 ಲಕ್ಷಕ್ಕೆ ಹೆಚ್ಚಿಸಿ
ರುವ ಕುರಿತು ಹೊರಡಿಸಲಾದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಬಹುಸಂಖ್ಯೆಯ ಆಟೊರಿಕ್ಷಾಗಳು ಅಧಿಕೃತ ಪರವಾನಗಿ ಇಲ್ಲದೆ ಓಡುತ್ತಿವೆ. ನಗರವು ಈಗಾಗಲೇ ವಾಹನದಟ್ಟಣೆಯಿಂದ ನಲುಗುತ್ತಿದೆ. ಇದರಿಂದ ವಾಯು ಮತ್ತು ಶಬ್ದ ಮಾಲಿನ್ಯ ಮಿತಿ ಮೀರಿದೆ. ಆದರೂ ಹೊಸ ಆಟೊ ರಿಕ್ಷಾಗಳಿಗೆ ಪರವಾನಗಿ ನೀಡಲಾಗುತ್ತಿದೆ’ ಎಂಬುದು ಅರ್ಜಿದಾರರ ಆಕ್ಷೇಪ.
ಅರ್ಜಿದಾರರ ಪರ ವಕೀಲ ಪುತ್ತಿಗೆ ಆರ್. ರಮೇಶ್ ವಾದ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.